ಮೀನಿನ ಬಲೆಗೆ ಸಿಲುಕಿ ರೌಡಿ ಶೀಟರ್ ಭದ್ರ ಸಾವು

ಮಂಗಳವಾರ, 9 ಫೆಬ್ರವರಿ 2016 (16:28 IST)
ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಭದ್ರ ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಆತ ನದಿಗೆ ಜಿಗಿದಿದ್ದ ಎಂದು ತಿಳಿದು ಬಂದಿದೆ. 
 
ನಿನ್ನೆ ತುಂಗಾ ನದಿ ತೀರದಲ್ಲಿ ಜೂಜಾಟವಾಡುತ್ತಿದ್ದ 7 ಜನರ ಗುಂಪಿನ ಮೇಲೆ ದಾಳಿ ನಡೆಸಿದ್ದ ಪೊಲೀಸರು 7 ಜನರನ್ನು ಬಂಧಿಸಲು ಸಫಲರಾಗಿದ್ದರು. ಇಬ್ಬರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ್ದರು.
 
ಒಬ್ಬನನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ರೌಡಿ ಶೀಟರ್ ಭದ್ರ ಎಂಬಾತ ನೀರಿನಿಂದ ಮೇಲೆ ಬಂದಿರಲಿಲ್ಲ.
 
ಇಂದು ಮುಂಜಾನೆ ರಮೇಶ್ ಎಂಬ ಮೀನುಗಾರ ತಾನು ಹಾಕಿದ್ದ ಮೀನಿನ ಬಲೆಗೆ ಶವವೊಂದು ಸಿಕ್ಕಿಕೊಂಡಿದೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಪೊಲೀಸರಿಗೆ ಆತ ನಿನ್ನೆ ನೀರಿಗೆ ಹಾರಿದ್ದ ಭದ್ರ ಎಂದು ಗೊತ್ತಿಗಿದೆ.
 
ಆತನ ಶವವನ್ನು ಮೇಲೆತ್ತಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
 
ಮೃತ ಭದ್ರ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ