ಡಿವೈಎಸ್ಪಿ ಹತ್ಯೆಗೆ ಯತ್ನಿಸಿದ ಮರಳು ಮಾಫಿಯಾ ಪಾತಕಿಗಳ ಬಂಧನ
ಭಾನುವಾರ, 31 ಆಗಸ್ಟ್ 2014 (11:09 IST)
ಮರಳು ಮಾಫಿಯಾದ ಪಾತಕಿಗಳು ಡಿವೈಎಸ್ಪಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಲಾರಿ ಚಾಲಕ ಮಧು, ಲೋಕೇಶ್ ಅವರನ್ನು ಬಂಧಿಸಲಾಗಿದೆ.
ನಾಗಮಂಗಲ ತಾಲೂಕಿನ ಅರೆಕೆರೆ ಗ್ರಾಮದ ಬಳಿ ಆಂಜನೇಯ ದೇವಸ್ಥಾನದ ಸಮೀಪ ನಿನ್ನೆ ಡಿವೈಎಸ್ಪಿ ಸವಿತಾ ಹೂಗಾರ್ ಕಾರಿಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆಸಿ ಹತ್ಯೆಗೆ ಆರೋಪಿಗಳು ಯತ್ನಿಸಿದ್ದರು. ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಅವರಿಬ್ಬರನ್ನು ಬಂಧಿಸಿದರು.
ಪೇದೆಗಳಾದ ಹನೀಫ್, ಲೋಕೇಶ್ ಸೇರಿದಂತೆ ಡಿವೈಎಸ್ಪಿ ಅಕ್ರಮ ಮರಳು ಸಾಗಣೆ ತಡೆಯಲು ತೆರಳಿದ್ದಾಗ ಈ ಘಟನೆ ನಡೆದಿತ್ತು. ಆರೋಪಿಗಳ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ, ಕೊಲೆ ಯತ್ನದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.