ಸಂತೋಷ್ ಲಾಡ್ ಕೇವಲ ಇಲಿ, ಇನ್ನೂ ಹೆಗ್ಗಣಗಳಿದ್ದಾರೆ: ಹಿರೇಮಠ್

ಶುಕ್ರವಾರ, 2 ಅಕ್ಟೋಬರ್ 2015 (14:47 IST)
ನಿಮ್ಮ ಸರ್ಕಾರದ ಐವರು ಸಚಿವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಿಮಗೆ ಧೈರ್ಯವಿದ್ದರೆ ಅವರನ್ನು ಕೂಡಲೇ ಮನೆಗೆ ಕಳುಹಿಸಿ ಎಂದು ಸಾಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಅವರು ಇಂದು ಜಿಲ್ಲೆಯ ಶಹಾಪುರ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಂಪುದಲ್ಲಿ ಸಿಎಂ ಸೇರಿದಂತೆ ಐವರು ಸಚಿವರು ಕಳಂಕಿತರಾಗಿದ್ದಾರೆ. ಸಚಿವರಾದ ಟಿ.ಬಿ.ಜಯಚಂದ್ರ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಹಾಗೂ ಕೆ.ಜೆ.ಜಾರ್ಜ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಲ್ಲಿ ಮುಂದುವರಿಯಲು ಈ ಐವರೂ ಕೂಡ ಅನರ್ಹರು. ಆದ ಕಾರಣ ನಿಮಗೆ ಧೈರ್ಯವಿದ್ದಲ್ಲಿ ಐವರನ್ನೂ ಸಂಪುಟದಿಂದ ಕಿತ್ತೊಗೆದು ಮನೆಗೆ ಓಡಿಸಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. 
 
ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಅರ್ಕಾವತಿ ವ್ಯಾಲಿಯಲ್ಲಿ ಸಿಲುಕಿದ್ದರೆ, ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ಪ್ರತಿರೂಪವೇ ಆಗಿದ್ದಾರೆ. ಆದ ಕಾರಣ ಪ್ರಸ್ತುತ ಬಳ್ಳಾರಿ ರಿಪಬ್ಲಿಕ್ ಆದಂತೆ ಪ್ರಸ್ತುತ ಕನಕಪುರದಲ್ಲಿಯೂ ರಿಪಬ್ಲಿಕ್ ಹುಟ್ಟಿಕೊಂಡಿದೆ. ಇನ್ನು ಜಯಚಂದ್ರ ಅವರ ವಿರುದ್ಧ ನ್ಯಾಯಾಲಯಕ್ಕೆ ಸಂಬಂಧಿಸಿದ ವಿವಾದವಿದೆ, ದಿನೇಶ್ ಗುಂಡೂರಾವ್ ಹಾಗೂ ದೇಶಪಾಂಡೆ ಭೂಗಳ್ಳರು. ಆದ ಕಾರಣ ಎಲ್ಲರೂ ಕೂಡ ಕಳಂಕಿತರಾಗಿದ್ದು, ಸಂಪುಟದಲ್ಲಿ ಮುಂದುವರಿಯುವ ಪ್ರಾಮಾಣಿಕತೆ ಯಾರಿಗೂ ಇಲ್ಲ. ಕಾಂಗ್ರೆಸ್‌ನಲ್ಲಿ ಉತ್ತಮ ನಾಯಕರನ್ನು ಹುಡುಕುವುದು ಕಷ್ಟ ಸಾಧ್ಯವಾಗಿದೆ. ಹೀಗಿರುವಾಗ ಕಾಂಗ್ರೆಸ್‌ನವರು ಏಕೆ ಆಡಳಿತ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು. 
 
ಇದೇ ವೇಳೆ, ಈ ಹಿಂದೆ ಸಚಿವ ಸ್ಥಾನ ಅನುಭವಿಸಿ ಹೋದ ಮಾಜಿ ಸಚಿವ ಸಂತೋಷ್ ಲಾಡ್ ಕೇವಲ ಇಲಿ. ಸಂಪುಟದಲ್ಲಿ ಇನ್ನೂ ಹೆಗ್ಗಣಗಳಿವೆ. ಅವರು ಆಡಳಿತ ಚುಕ್ಕಾಣಿ ಹಿಡಿಯಲು ಅನರ್ಹರು. ಆದ ಕಾರಣ ಆ ಹೆಗ್ಗಣಗಳನ್ನು ಮೊದಲು ಸಂಪುಟದಿಂದ ಓಡಿಸಬೇಕು ಎಂದು ಆಗ್ರಹಿಸಿದರು.    

ವೆಬ್ದುನಿಯಾವನ್ನು ಓದಿ