ರಾಘವೇಶ್ವರ ಶ್ರೀಗಳ ಮರ್ಮಾಂಗದ ಮೇಲೆ ಮಚ್ಚೆ ಇತ್ತು: ಪ್ರೇಮಲತಾ

ಶುಕ್ರವಾರ, 25 ಸೆಪ್ಟಂಬರ್ 2015 (16:09 IST)
ರಾಘವೇಶ್ವರ ಶ್ರೀಗಳ ವಿರುದ್ಧ ಇರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಪ್ರೇಮಲತಾ ಅವರು ಶ್ರೀಗಳ ಮರ್ಮಾಂಗದ ಮೇಲೆ ಮಚ್ಚೆ ಇತ್ತು ಎಂಬ ಹೇಳಿಕೆಯನ್ನು ನೀಡಿದ್ದರು ಎಂಬುದಾಗಿ ಸಿಐಡಿ ಮೂಲಗಳು ಇಂದು ತಿಳಿಸಿವೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಾಳೆ ಆರೋಪಪಟ್ಟಿ ಸಲ್ಲಿಸಲಿದ್ದು, ಈ ವಿಷಯವು ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಶ್ರೀಗಳ ಬೆಂಬಲಿಗರು ಅತ್ಯಾಚಾರ ನಡೆದಿದ್ದೇ ಆದಲ್ಲಿ ಪ್ರೇಮಲತಾ ಅವರು ಶ್ರೀಗಳ ದೇಹದ ಮೇಲೆ ಯಾವ ಗುರುತುಗಳಿವೆ ಎಂಬ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದ್ದರು. 
 
ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಐಡಿ ಅಧಿಕಾರಿಗಳು, ಈ ಸಂಬಂಧ ನಾವು ಪ್ರೇಮಲತಾ ಅವರನ್ನು ಪ್ರಶ್ನಿಸಿದ್ದೆವು. ಅಲ್ಲದೆ ಅವರೂ ಕೂಡ ಶ್ರೀಗಳ ಮರ್ಮಾಂಗದ ಮೇಲೆ ಮಚ್ಚೆ ಇದೆ ಎಂದು ಹೇಳಿಕೆ ದಾಖಲಿಸಿಲಿಸಿದ್ದರು. ಬಳಿಕ ಪ್ರಮೇಲತಾ ಅವರ ಹೇಳಿಕೆಯನ್ನಾಧರಿಸಿ ಶ್ರೀಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಮುಂದಾಗಿದ್ದೆವು. ಆದರೆ ಅದಕ್ಕೆ ಶ್ರೀಗಳು ಸಮ್ಮತಿ ಸೂಚಿಸಲಿಲ್ಲ. ಇದಲ್ಲದೆ ಸಿಐಡಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದರು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. 
 
ತಮ್ಮ ಮೇಲೆ ರಾಘವೇಶ್ವರ ಶ್ರೀಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮಠದ ರಾಮಕಥಾ ಗಾಯಕಿ ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಅತ್ಯಾಚಾರ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 506, 354 ಮತ್ತು 376(2)(ಎಫ್)ಗಳ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪರಿಣಾಮ ತನಿಖೆ ಪೂರ್ಣಗೊಳಿಸಿರುವ ಅಧಿಕಾರಿಗಳು ನಾಳೆ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯವು ಚರ್ಚಾ ವಿಷಯವಾಗಿ ಪ್ರಸ್ತಾಪವಾಗಿದೆ.

ವೆಬ್ದುನಿಯಾವನ್ನು ಓದಿ