ದೇಶವನ್ನು ಟೀಕಿಸುವವರನ್ನು ತಡೆಯಲು ದೇಶದ್ರೋಹ ಕಾನೂನು ಜಾರಿ ಅಗತ್ಯ: ಹೆಗ್ಡೆ

ಸೋಮವಾರ, 22 ಫೆಬ್ರವರಿ 2016 (17:48 IST)
ದೇಶದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರನ್ನು ತಡೆಯಲು ದೇಶದಲ್ಲಿ ದೇಶದ್ರೋಹ ಕಾಯ್ದೆಯಂತಹ ಕೆಲ ಕಾನೂನುಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.
 
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾದ ಹೆಗ್ಡೆ ಮಾತನಾಡಿ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಅವರನ್ನು ಗಲ್ಲಿಗೇರಿಸಿರುವುದು ನ್ಯಾಯಾಂಗದ ಹತ್ಯೆ ಎನ್ನುವ ಘೋಷಣೆಗಳನ್ನು ಕೂಗಿದ್ದಲ್ಲದೇ, ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವದು ದೇಶದ್ರೋಹವಾಗುತ್ತದೆ.ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
 
ದೇಶದ ವಿರುದ್ಧ ಮನಬಂದಂತೆ ಹೇಳಿಕೆ ನೀಡುವವರನ್ನು ಹದ್ದುಬಸ್ತಿನಲ್ಲಿಡಲು ದೇಶದ್ರೋಹ ಸೇರಿದಂತೆ ಕೆಲ ಕಾಯ್ದೆಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ದೇಶದ್ರೋಹದ ಆರೋಪದ ಮೇಲೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಇತರ ಐವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 
 
ದೇಶಭಕ್ತರಾದವರು ದೇಶವನ್ನು ಹೀಯಾಳಿಸಲು ಹೋಗುವುದಿಲ್ಲ. ಅದರಂತೆ ನಾನು ಕೂಡಾ ಒಬ್ಬ ದೇಶಭಕ್ತ. ನನಗೆ ದೇಶದ್ರೋಹ ಕಾನೂನಿನಲ್ಲಿ ನಂಬಿಕೆಯಿದೆ. ಪ್ರಜಾಪ್ರಭುತ್ವ ಉಳಿಯಬೇಕಾದಲ್ಲಿ ದೇಶದ ವಿರುದ್ಧ ಮಾತನಾಡುವವರಿಗೆ ಕೆಲ ನಿಯಂತ್ರಣಗಳನ್ನು ಹೇರಬೇಕಾಗುತ್ತದೆ ಎಂದು ಹೇಳಿದ್ದಾರೆ.
 
ಸರಕಾರವನ್ನು ಟೀಕಿಸಿ, ವ್ಯವಸ್ಥೆಯನ್ನು ಟೀಕಿಸಿ, ವೈಯಕ್ತಿಕವಾಗಿ ಟೀಕಿಸಿ. ಆದರೆ, ದೇಶಭಕ್ತಿಯನ್ನು ಯಾವತ್ತೂ ಟೀಕಿಸಬಾರದು ಎಂದು ತಿಳಿಸಿದ್ದಾರೆ.
 
ಸುಪ್ರೀಂಕೋರ್ಟ್ ಹಿಂದೆ ನೀಡಿದ ತೀರ್ಪಿನಲ್ಲಿ ಕೇವಲ ಹೇಳಿಕೆಗಳನ್ನು ನೀಡುವುದು ದೇಶದ್ರೋಹವಾಗದು.ಹೇಳಿಕೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ದೇಶದ್ರೋಹವಾಗುತ್ತದೆ ಎಂದು ನೀಡಿದ ತೀರ್ಪಿಗೆ ತಮ್ಮ ಸಹಮತವಿಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ