ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಪೊಲೀಸರಿಗೆ ತರಾಟೆ ತೆಗೆದುಕೊಂಡ ಸಿದ್ದು

ಶನಿವಾರ, 20 ಡಿಸೆಂಬರ್ 2014 (17:38 IST)
ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ವಿರುದ್ಧ ದೂರು ನೀಡಿದ್ದರೂ ಕೂಡ ಪೊಲೀಸರು ಯಾವುದೇ ರೀತಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ಯುವತಿಯೋರ್ವಳು ಸಿಎಂ ಸಿದ್ದರಾಮಯ್ಯ ಅವರ ಬಳಿ ಅಳಲು ತೋಡಿಕೊಂಡ ಘಟನೆ ನಗರದಲ್ಲಿ ನಡೆಯಿತು. 
 
ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಯುವತಿ, ನಾನು ಕೆಲಸ ನಿರ್ವಹಿಸುತ್ತಿರುವ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ತುಕಾರಾಂ ಮಜಗಿ ಎಂಬ ಉನ್ನತಾಧಿಕಾರಿಯೋರ್ವರು ನನಗೆ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾನು ಪೊಲೀಸರ ಬಳಿಗೆ ತೆರಳಿ ದೂರು ದಾಖಲಿಸಿದ್ದೆ. ಆದರೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದರು.
 
ಬಳಿಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸಿಎಂ, 376ನೇ ಕಲಂ ಅಡಿಯಲ್ಲಿ ಯಾಕ್ರೀ ದೂರು ದಾಖಲಿಸಿಕೊಂಡಿಲ್ಲ. ಆರೋಪಿಯನ್ನು ಯಾಕೆ ಬಂಧಿಸಿಲ್ಲ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ತರವಾಯ ಉತ್ತರಿಸಿದ ಪೊಲೀಸರು, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ನ್ಯಾಯಾಲಯಕ್ಕೂ ಕೂಡ ಹಾಜರುಪಡಿಸಲಾಗಿತ್ತು. ಆದರೆ ಜಾಮೀನಿನ ಮೇರೆಗೆ ಆರೋಪಿ ಹೊರ ಬಂದಿರುವುದಾಗಿ ತಿಳಿಸಿದರು. 
 
ಬಳಿಕ ಸಿಎಂ ಸಿದ್ದರಾಮಯ್ಯ, ಮತ್ತೊಮ್ಮ ದೂರು ದಾಖಲಿಸಿ ಸರಿಯಾದ ಹೇಳಿಕೆ ನೀಡಿ ಎಂದು ಸಂತ್ರಸ್ತ ಯುವತಿಗೆ ಸೂಚಿಸಿ, ಪೊಲೀಸರಿಗೂ ಕೂಡ 376ನೇ ಕಲಂ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಿ ಎಂದು ನಿರ್ದೇಶಿಸಿದರು.   
 
ಈಕೆಯ ದೂರನ್ನು ಆಧರಿಸಿ ಮಹಿಳಾ ಸಹೋದ್ಯೋಗಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಳೆದ ನ.19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಆರೋಪಿ ಜಾಮೀನಿನ ಮೂಲಕ ಹೊರ ಬಂದು ಮತ್ತೆ ಅದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಬೇಸರಗೊಂಡ ಯುವತಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ವಿವರಣೆ ನೀಡಿದರು.   

ವೆಬ್ದುನಿಯಾವನ್ನು ಓದಿ