ಶಿವಣ್ಣನ ಆರೋಗ್ಯಕ್ಕಾಗಿ ಪಂಚ ತುಲಾಭಾರ ಸಲ್ಲಿಸಲಿರುವ ಶರವಣ

ಮಂಗಳವಾರ, 6 ಅಕ್ಟೋಬರ್ 2015 (16:31 IST)
ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿಯನ್ನು ತಿಳಿಯುತ್ತಿದ್ದಂತೆಯೇ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಇಂದು ತಿರುಪತಿ ತಿಮ್ಮಪ್ಪನಿಗೆ ಪಂಚಲೋಹಗಳ ತುಲಾಭಾರವನ್ನು ನೀಡುವುದಾಗಿ ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್ ನಮ್ಮ ರಾಜ್ಯದ ಆರು ಕೋಟಿ ಕನ್ನಡಿಗರ ಆಸ್ತಿ. ಅವರ ಆರೋಗ್ಯ ಸುಧಾರಿಸಿ ಸುಗಮವಾಗಿ ಮನೆಗೆ ವಾಪಾಸಾಗಲಿ ಎಂದು ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಕಟ್ಟಿಕೊಂಡಿದ್ದು, ಚಿನ್ನ, ಬೆಳ್ಳಿ ಸೇರಿದಂತೆ ಇತರೆ 5 ಲೋಹಗಳಿಂದ ಮಿಶ್ರಣವಾಗುವ ಪಂಚಲೋಹ ತುಲಾಭಾರವನ್ನು ಸಲ್ಲಿಸಲಿದ್ದೇನೆ ಎಂದರು. 
 
ನೀವೇ ಖುದ್ದು ಒಬ್ಬೊಂಟಿಯಾಗಿ ಸಲ್ಲಿಸುವಿರೋ ಅಥವಾ ನಿಮ್ಮೊಂದಿಗೆ ಶಿವರಾಜ್ ಕುಮಾರ್ ಅವರನ್ನೂ ಕರೆದೊಯ್ಯುವಿರೋ ಎಂದು ಪತ್ರಕರ್ತರು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಶಿವರಾಜ್ ಕುಮಾರ್ ಅವರಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇನೆ. ಆದರೆ ಪ್ರಸ್ತುತ ದೇವಸ್ಥಾನಕ್ಕೆ ತೆರಳುತ್ತಿದ್ದು ಪ್ರಾರ್ಥನೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. 
 
ಇನ್ನು ಇಂದು ಬೆಳಗ್ಗೆ ವ್ಯಾಯಾಮ ಮಾಡುತ್ತಿದ್ದ ವೇಳೆಯಲ್ಲಿ ತಮ್ಮ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿದೆ ಎಂಬ ಕಾರಣದಿಂದ ನಟ ಶಿವರಾಜ್ ಕುಮಾರ್ ಅವರು ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಯಾವುದೇ ತೊಂದರೆ ಇಳ್ಲದೆ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶರವಣ ಹರಕೆ ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ