ನಟ ಚೇತನ್ ಮೇಲೆ ಎಸ್ಐ ಹಲ್ಲೆ: ತನಿಖೆಗೆ ಆದೇಶ

ಗುರುವಾರ, 29 ಜನವರಿ 2015 (18:24 IST)
ನಗರದ ಕಬ್ಬನ್‌ಪಾರ್ಕ್ ಠಾಣೆಯ ಎಸ್‌ಐ ನವೀನ್ ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಚೇತನ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
 
ನಟಿ ತಾರಾ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದ ಚೇತನ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಜ.24 ರಂದು ಕಬ್ಬನ್ ಪಾರ್ಕ್ ವ್ಯಾಪ್ತಿಯ ಚರ್ಚ್ ಸ್ಟ್ರೀಟ್‌ ರಸ್ತೆಯಲ್ಲಿ ತಾನು ತನ್ನ ಸ್ನೇಹಿತರೊಂದಿಗೆ ನಿಂತಿದ್ದಾಗ ಎಸ್‌ಐ ನವೀನ್ ಅವರು ಸ್ಥಳಕ್ಕೆ ಆಗಮಿಸಿದರು. ಬಳಿಕ ಇಬ್ಬರ ನಡುವೆ ಮಾತಿನ ಚಕಮಚಿ ನಡೆಯಿತು. ಬಳಿಕ ನವೀನ್ ಏಕ ವಚನದಲ್ಲಿ ಪ್ರತಿಕ್ರಿಯಿಸಿದೆ ಎಂಬ ಕಾರಣ ನೀಡಿ ತಮ್ಮ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಆದರೆ ನಾನು ಅವರು ಸರ್ಕಾರಿ ಅಧಿಕಾರಿಯಾಗಿದ್ದ ಕಾರಣ ಕೊಡುವ ಗೌರವ ಕೊಟ್ಟಿದ್ದೆ. ಆದರೂ ನನ್ನ ಮೇಲೆ ವಿನಾಃ ಕಾರಣ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ನನಗೆ ನ್ಯಾಯ ದೊರಕಿಸಿಕೊಡಿ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಲ್ಲಿ ಮನವಿ ಮಾಡಿಕೊಂಡರು. 
 
ಬಳಿಕ ಪ್ರತಿಕ್ರಿಯಿಸಿದ ಆಯುಕ್ತರು, ಪ್ರಕರಣದ ತನಿಖೆಗಾಗಿ ತಂಡವನ್ನು ರಚಿಸಿ ಸೂಕ್ತವಾಗಿ ತನಿಖೆ ನಡೆಸುವಂತೆ ನಗರದ ಪೂರ್ವ ವಿಭಾಗದ ಡಿವೈಎಸ್ ಪಿ ಸಂದೀಪ್ ಪಾಟೀಲ್ ಅವರಿಗೆ ಸೂಚಿಸಿದರು. ಬಳಿಕ ಸಂಪೂರ್ಣವಾಗಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಚೇತನ್ ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದು, ಪರಿಶೀಲಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ