ಈಶ್ವರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಗುರುವಾರ, 2 ಜುಲೈ 2015 (15:48 IST)
ಚರ್ಚೆ ವೇಳೆ ಸಭಾತ್ಯಾಗ ಮಾಡಿದರು ಎಂಬ ಕಾರಣದಿಂದ ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಕಿಡಿಕಾರಿದ್ದು, ಈಶ್ವರಪ್ಪ ನವರಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾಳಜಿ ಅಲ್ಲ. ಸಂಯುಕ್ತ ವ್ಯವಸ್ಥೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು. 
 
ಇಂದು ವಿಧಾನ ಪರಿಷತ್‌ನಲ್ಲಿ ನಡೆಯುತ್ತಿದ್ದ ಕಲಾಪ ವೇಳೆಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರಿಗೆ ಸಂಯುಕ್ತ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅರಿವು, ಕಾಳಜಿ ಇದ್ದಿದ್ದರೆ ಚರ್ಚೆಗೆ ಬರುತ್ತಿದ್ದರು. ರಾಜ್ಯದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಾವಿರಾರು ಸಮಸ್ಯೆಗಳಿವೆ. ಆದರೆ ಸಾಧ್ಯವಿಲ್ಲದ ಯಾವುದೋ ಒಂದು ವಿಷಯವನ್ನು ಹಿಡಿದುಕೊಂಡು ಪಟ್ಟು ಸಾಧಿಸುತ್ತಿದ್ದಾರೆ. ವಿಪಕ್ಷಗಳು ಅನುಸರಿಸುತ್ತಿರುವ ನೀತಿ ಸರಿಯಲ್ಲ ಎಂದು ಕಿಡಿಕಾರಿದರು.  
 
ಕಾರಣವೇನು ?
ಕಲಾಪದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಲೋಕಾಯುಕ್ತರನ್ನು ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳುವ ಮೂಲಕ ಪದಚ್ಯುತಿಗೊಳಿಸಬೇಕು ಎಂದು ಒತ್ತಾಯಿಸಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತರ ಪದಚ್ಯುತಿ ಬಗ್ಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಇದಕ್ಕೆ ಕುಪಿತಗೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸಭಾತ್ಯಾಗ ಮಾಡಿದರು. ಮತ್ತೆ ನಡೆಯುತ್ತಿದ್ದ ಕಲಾಪಕ್ಕೆ ಹಾಜರಾಗಲೇ ಇಲ್ಲ. ಇದರಿಂದ ಸಭಾಪತಿಗಳು ಕಲಾಪ ನಡೆಯಲು ಸಾಧ್ಯವಿಲ್ಲ ಎಂದು ಕಲಾಪವನ್ನು ಮೊಟಕುಗೊಳಿಸಿದರು. ಬಳಿಕ ಸಿಎಂ ಚರ್ಚೆಗೆ ಬರುವಂತೆ ಮನವಿ ಮಾಡಿದರೂ ಕೂಡ ಈಶ್ವರಪ್ಪ ಹಾಗೂ ಅವರ ಬೆಂಬಲಿಗರು ಸಭೆಗೆ ಬರಲಿಲ್ಲ. ಇದರಿಂದ ಕುಪಿತಗೊಂಡ ಸಿಎಂ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು. 

ವೆಬ್ದುನಿಯಾವನ್ನು ಓದಿ