ಚಲನಚಿತ್ರ ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದು

ಭಾನುವಾರ, 24 ಮೇ 2015 (11:42 IST)
ನಗರದ ಬಸವೇಶ್ವರನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಚಿತ್ರರಂಗದ ವತಿಯಿಂದ ಚಲನಚಿತ್ರ ಕ್ರೀಡೋತ್ಸವವನ್ನು ಏರ್ಪಡಿಸಲಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಡು ಎಸೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
 
ಕ್ರೀಡೋತ್ಸವವು ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ ನಾಲ್ಕು ಗಂಟೆ ವರೆಗೆ ನಡೆಯಲಿದ್ದು, ಈ ಕ್ರೀಡೋತ್ಸವದಲ್ಲಿ ಮ್ಯೂಜಿಕಲ್ ಚೇರ್, ಹೈ ಜಂಪ್, ಲಾಂಗ್ ಜಂಪ್ ಹಾಗೂ ಭರ್ಜಿ ಎಸೆತ ಸೇರಿದಂತೆ ಇತರೆ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸ್ಯಾಂಡಲ್‌ವುಡ್ ಚಿತ್ರರಂಗದ ಗಣ್ಯರು ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಈಗಾಗಲೇ ಖಳ ನಾಯಕ ರವಿಶಂಕರ್ ಹಾಗೂ ನಾಯಕ ನಟ ಶರಣ್ ಹಾಗೂ ಹಿರಿಯ ನಟಿ ಜಯಂತಿ ಸೇರಿದಂತೆ ಇನ್ನಿತರೆ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
 
ಇದಕ್ಕೂ ಮೂರು ದಿನಗಳ ಮುನ್ನ ಕ್ರೀಡಾ ರಥವನ್ನು ಏರ್ಪಡಿಸಿ ಚಿತ್ರರಂಗದ ಎಲ್ಲಾ ಗಣ್ಯರ ನಿವಾಸಗಳಿಗೆ ಕಳುಹಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಖ್ಯಾತ ಗಣ್ಯರು ಆಗಮಿಸಲಿದ್ದಾರೆ ಎನ್ನಲಾಗಿದೆ.  
 
ಇನ್ನು ಸಂಜೆ ನಾಲ್ಕು ಗಂಟೆಗೆ ಕ್ರೀಡೆಗಳು ಮುಕ್ತಾಯವಾದ ಬಳಿಕ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ನಾಯಕ ನಟ ಜಗ್ಗೇಶ್ ನಟಿ ರಚಿತಾ ಸೇರಿದಂತೆ ಇತರೆ ತಾರೆಗಳು ಅಭಿಮಾನಿಗಳಿಗೆ ರಸದೌತಣ ಬಡಿಸಲಿದ್ದಾರೆ.  

ವೆಬ್ದುನಿಯಾವನ್ನು ಓದಿ