ಪ್ರಭಾವಿಗಳು ಸ್ವಾರ್ಥಕ್ಕಾಗಿಯೇ ರಾಜ್ಯವನ್ನು ಒಡೆಯಲೆತ್ನಿಸುತ್ತಿದ್ದಾರೆ: ಸಿಎಂ

ಶನಿವಾರ, 11 ಏಪ್ರಿಲ್ 2015 (17:00 IST)
ಉತ್ತರ ಕರ್ನಾಟಕ ಪ್ರತ್ಯೇಕತೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಇಂದು ಪ್ರತಿಕ್ರಿಯಿಸಿದ್ದು, ಉತ್ತರ ಕರ್ನಾಟಕ ಭಾಗದ ಕೆಲ ಪ್ರಭಾವಿಗಳು ತಮ್ಮ ಸ್ವಾರ್ಥದ ಇಡೇರಿಕೆಗಾಗಿಯೇ ಅಖಂಡ ಕರ್ನಾಟಕವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.  
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಅಖಂಡ ಕರ್ನಾಟಕವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಆದರೆಕೆಲ ಪ್ರಭಾವಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಪ್ರತ್ಯೇಕ ರಾಜ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ. ಅಖಂಡ ಕರ್ನಾಟಕ ಅಖಂಡ ರಾಜ್ಯವಾಗಿಯೇ ಉಳಿಯಲಿದೆ ಎಂದರು. 
 
ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಹಾಗೂ ಈ ಭಾಗದ ಸಮಸ್ಯೆಗಳನ್ನು ಈಡೇರಿಸುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಇಲ್ಲಿನ ಹಿಂದುಳಿದ ವರ್ಗಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಇಷ್ಟಾದರೂ ಕೆಲವು ಪ್ರತ್ಯೇಕ ರಾಜ್ಯದ ಹೇಳಿಕೆ ನೀಡುತ್ತಿರುವುದು ಅಸಮದಾನ ತಂದಿದೆ ಎಂದರು. 
 
ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡವಳ್ಳಿ ಅವರು ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರ ಅನುದಾನದ ವಿಷಯದಲ್ಲಿ ದಕ್ಷಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ತಾರತಮ್ಯ ಮಾಡಿಕೊಂಡು ಅನ್ಯಾಯ ಎಸಗುತ್ತಿದೆ. ನಮ್ಮ ಅಭಿವೃದ್ಧಿಯಾಗಬೇಕಾದಲ್ಲಿ ಪ್ರತ್ಯೇಕ ರಾಜ್ಯ ಮಾಡಿಕೊಳ್ಳಬೇಕು ಎಂದು ಉದ್ಗರಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.   

ವೆಬ್ದುನಿಯಾವನ್ನು ಓದಿ