ಇಂದಿನಿಂದ ಎಸ್ಎಸ್ಎಲ್‌ಸಿ ಪರೀಕ್ಷೆ: ವಿಜಯಪುರದಲ್ಲಿ ಎರಡು ಗಂಟೆ ವಿಳಂಬ

ಸೋಮವಾರ, 30 ಮಾರ್ಚ್ 2015 (11:08 IST)
ಇಂದಿನಿಂದ 10ನೇ ತರಗತಿ ಪರೀಕ್ಷೆ ಆರಂಭವಾಗಿದ್ದು, ಪ್ರಶ್ನೆ ಪತ್ರಿಕೆಗಳ ಬಂಡಲ್ ಅದಲು ಬದಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಇಂದು ಎರಡು ಗಂಟೆ ತಡವಾಗಿ ಪರೀಕ್ಷೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. 
 
ಮೂಲಗಳ ಪ್ರಕಾರ, ಪ್ರಶ್ನೆ ಪತ್ರಿಕೆಗಳು ನಿಗಧಿತ ಪರೀಕ್ಷಾ ಕೇಂದ್ರಕ್ಕೆ ಮಾತ್ರ ತಲುಪಿಸಬೇಕು. ಆದರೆ ತಲುಪಿಸುವ ಆತುರತೆಯಿಂದ ಅಧಿಕಾರಿಗಳು ಒಂದು ಕೇಂದ್ರದ ಪ್ರಶ್ನೆಪತ್ರಿಕೆಗಳ ಬಂಡಲ್‌ನ್ನು ಮತ್ತೊಂದು ಕೇಂದ್ರಕ್ಕೆ ತಲುಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವನ್ನು ಮತ್ತೆ ನಿಗಧಿತ ಕೇಂದ್ರಕ್ಕೆ ತಲುಪಿಸಬೇಕಾಗಿದೆ. ಆ ಬಳಿಕವಷ್ಟೇ ಪರೀಕ್ಷೆ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಈಗಾಗಲೇ ನಿಗಧಿತ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತಿದೆ. 
 
ಇನ್ನು ಪ್ರಕರಣ ಬೆಳಕಿಗೆ ಬಂದ ಕೂಡಲೇ ಹಿರಿಯ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಆದರೆ ಈ ಘಟನೆಯಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು. ಎರಡು ಗಂಟೆ ತಡವಾಗಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. 
 
ಇನ್ನು ಈ ಘಟನೆಯು ಜಿಲ್ಲೆಯ ಬಿಜ್ಜರಿಗೆ, ಬುರ್ಣಾಪುರ ಮತ್ತು ಬಬಲೇಶ್ವರ ಎಂಬ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ನಿಯಮಾನುಸಾರ ಬೆಳಗ್ಗೆ 9.30ಕ್ಕೆ ಪರೀಕ್ಷೆ ಆರಂಭವಾಗಬೇಕಿತ್ತು. 

ವೆಬ್ದುನಿಯಾವನ್ನು ಓದಿ