ಅತ್ಯಾಚಾರವೆಸಗಿ ಕೊಲೆ: ಸತ್ಯ ಬಾಯ್ಬಿಟ್ಟ ಕಾಮುಕರು

ಶುಕ್ರವಾರ, 19 ಫೆಬ್ರವರಿ 2016 (10:47 IST)
ಶೃಂಗೇರಿ ತಾಲೂಕಿನ ಜೆಸಿಬಿಎಂ ಕಾಲೇಜು ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಕಾಲೇಜಿನಿಂದ ಒಬ್ಬಳೇ ಮನೆ ಮರಳುತ್ತಿದ್ದ ವಿದ್ಯಾರ್ಥಿನಿ ಸ್ವಾತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಹತ್ಯೆಗೈದು ಬಾವಿಯಲ್ಲಿ ಎಸೆದಿದ್ದಾಗಿ ಬಂಧಿತ ಆರೋಪಿಗಳಾದ ಪ್ರದೀಪ್ (27) ಮತ್ತು ಸ೦ತೋಷ (25) ತಪ್ಪೊಪ್ಪಿಕೊಂಡಿದ್ದಾರೆ. 
 
ಮ೦ಗಳವಾರ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ತನ್ನ ಗ್ರಾಮ ವೈಕು೦ಠಪುರಕ್ಕೆ ಹೊರಟಿದ್ದ ಸ್ವಾತಿ ಅದೇ ದಿನ ಸಂಜೆ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಳು. 
 
ಪ್ರತಿದಿನ ಸಂಜೆ ತಂದೆಯೊಂದಿಗೆ ಮನೆಗೆ ತೆರಳುತ್ತಿದ್ದ ಯುವತಿ ಮಂಗಳವಾರ ಪರೀಕ್ಷೆ ಮುಗಿಸಿ ಬೇಗನೆ ಮನೆಗೆ ಹೊರಟಿದ್ದಳು . ಸಂಜೆಯಾದರೂ ಮಗಳು ತನ್ನ ಅಂಗಡಿ ಬಳಿ ಬರಲಿಲ್ಲವೆಂದು ಗಾಬರಿಗೊಂಡ ತಂದೆ ಮನೆಗೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿಯೂ ತಲುಪಲಿಲ್ಲವೆಂದು ಪರಿಶೀಲನೆಗಿಳಿದಾಗ ಆಕೆಯ ಶವ ಹಾಳು ಬಾವಿಯಲ್ಲಿ ಪತ್ತೆಯಾಗಿತ್ತು. 

ಶೃಂಗೇರಿ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. 
 
ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್ ಬಂಧನಕ್ಕೊಳಪಡುವ ಭೀತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.  ಆರೋಪಿಗಳು ಈ ಹಿಂದೆ ಕೂಡ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ