ಉಪಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆ ನಡೆದು, ವಿಧಾನಸಭೆಯಲ್ಲಿ ಶಾಸಕ ತನ್ವೀರ್ ಸೇಠ್ ಸುಭಾಷ್ ಅಡಿ ಪದಚ್ಯುತಿ ಪ್ರಸ್ತಾಪವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ನಾವು ಲೋಕಾಯುಕ್ತ ವಜಾಕ್ಕೆ ಪ್ರಯತ್ನಿಸುತ್ತಿರುವ ನಡುವೆ ಉಪಲೋಕಾಯುಕ್ತರನ್ನೂ ವಜಾ ಮಾಡಿ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚುವ ಹುನ್ನಾರವನ್ನು ಸರ್ಕಾರ ನಡೆಸಿದೆ ಎಂದು ಶೆಟ್ಟರ್ ಆರೋಪಿಸಿದರು.
ಈ ನಡುವೆ ಸಚಿವ ಆಂಜನೇಯ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಮತ್ತೆ ಧರಣಿ ನಡೆಸಿದರು. ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು. ಈ ನಡುವೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಸುಭಾಷ್ ಅಡಿ ವಜಾ ಮಾಡುವ ಪ್ರಸ್ತಾಪ ಮಂಡನೆ ಸಂಸದೀಯ ನಡವಳಿಕೆಗೆ ವಿರುದ್ಧವಾದ ನಿರ್ಧಾರ ಎಂದು ಟೀಕಿಸಿದರು. ಲೋಕಾಯುಕ್ತರ ವಜಾಕ್ಕೆ ಸಹಿ ಸಂಗ್ರಹ ಮಾಡುವ ಜತೆಯಲ್ಲಿ ಉಪಲೋಕಾಯುಕ್ತರ ಪದಚ್ಯುತಿಗೆ ಸರ್ಕಾರ ಪ್ರಯತ್ನಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಲು ಹೊರಟಿದೆ ಎಂದು ಆರೋಪಿಸಿದರು.