ಮೇಕೆದಾಟು ವಿಷಯದಲ್ಲಿ ತಮಿಳಿಗರು ಕ್ಯಾತೆ ಬಿಡಬೇಕು: ಸಿದ್ದರಾಮಯ್ಯ

ಸೋಮವಾರ, 30 ಮಾರ್ಚ್ 2015 (15:29 IST)
ಯೋಜನೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ತಮಿಳುನಾಡಿನ ಜನ ಪದೇ ಪದೇ ಕ್ಯಾತೆ ತೆಗೆಯುವುದು ಸರಿಯಲ್ಲ ಎನ್ನುವ ಮೂಲಕ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣವಾಗಲಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಖಚಿತಪಡಿಸಿದ್ದಾರೆ. 
 
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಜನರು ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದ್ದಾರೆ. ಅದನ್ನು ನಿಲ್ಲಿನಸಬೇಕು ಎಂದ ಅವರು, ರಾಜ್ಯ ಸರ್ಕಾರವು ಮೇಕೆದಾಟುವಿನಲ್ಲಿ  ಅಣೆಕಟ್ಟು ನಿರ್ಮಿಸಲು ಸಿದ್ಧವಾಗಿದ್ದು, ಅದು ಖಚಿತ ಕೂಡ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ರೈತರ ಪ್ರತಿಭಟನಾ ಕ್ರಮ ಸರಿಯಲ್ಲ ಎಂದರು. 
 
ತಮಿಳುನಾಡಿನ ರೈತ ಸಂಘಟನೆಗಳು ಕಳೆದ ಶನಿವಾರವಷ್ಟೇ ರಾಜ್ಯಾದ್ಯಂತ ಬಂದ್ ಘೋಷಿಸುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದವು. ಅಲ್ಲದೆ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟನ್ನು ನಿರ್ಮಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗವಾಗಿರುವ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿ ಜಲ ವಿದ್ಯುತ್ ಉತ್ಪಾದನೆಗೆ ಸರ್ಕಾರ ಮುಂದಾಗಿದೆ.  

ವೆಬ್ದುನಿಯಾವನ್ನು ಓದಿ