ಜಯಲಲಿತಾ, ಪನ್ನೀರ್ ಸೆಲ್ವಂ ಅಣಕು ತಿಥಿ

ಶನಿವಾರ, 18 ಏಪ್ರಿಲ್ 2015 (12:43 IST)
ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 
ಚಿಕ್ಕಬಳ್ಳಾಪುರದಲ್ಲಿ ಪ್ರಗತಿಪರ ಸಂಘಟನೆಗಳು  ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಮಾಜಿ ಸಿಎಂಗಳಾದ ಕರುಣಾನಿಧಿ,ಜಯಲಲಿತಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರೆ, ನಗರದ ಪುರಭವನದ ಮುಂದೆ ನೆರೆದಿದ್ದ ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹಾಗೂ ಹಾಲಿ ಸಿಎಂ ಪನ್ನೀರ್ ಸೆಲ್ವಂ ಅಣಕು ತಿಥಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರ ಭಾವಚಿತ್ರಗಳ ಮುಂದೆ ಪಿಂಡಗಳನ್ನಿಟ್ಟು ತಿಥಿಯನ್ನು ನಡೆಸಲಾಯಿತು.
 
ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಪ್ರವೀಣ್ ಶೆಟ್ಟಿ ಬಣ, ಜಯಕರ್ನಾಟಕ ಸಂಘ, ಕೋಡಿಹಳ್ಳಿ ಚಂದ್ರಶೇಖರ್, ಪ್ರೊ.ಚಂಪಾ ಸೇರಿದಂತೆ ಹಲವು ಸಾಹಿತಿಗಳು, ನೆನಪಿರಲಿ ಪ್ರೇಮ್ ಮತ್ತು ಹಲವು ನಟ-ನಟಿಯರು, ಸೇರಿದಂತೆ ಹಲವು ಸಂಘಟನೆಗಳು ಈಗಾಗಲೇ ಟೌನ್‍ಹಾಲ್ ಬಳಿಯಿಂದ  ಮೆರವಣಿಗೆ ಪ್ರಾರಂಭಿಸಿದ್ದು, ಕೆಲವೇ ಕ್ಷಣಗಳಲ್ಲಿ ಫ್ರೀಡಂ ಪಾರ್ಕ್‍ ತಲುಪಲಿದ್ದಾರೆ.
 
ಬೆಂಗಳೂರಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಕೋಲಾರ, ಮಂಡ್ಯ, ಚಿತ್ರದುರ್ಗ, ತುಮಕೂರು, ಬಳ್ಳಾರಿ ಸೇರಿದಂತೆ ಹಲವೆಡೆ ಪ್ರತಿಭಟನೆಯ ಕಾವೇರಿದೆ.  

ವೆಬ್ದುನಿಯಾವನ್ನು ಓದಿ