ಎಟಿಎಂ ಒಡೆದು 2ಲಕ್ಷಕ್ಕೂ ಹೆಚ್ಚು ಹಣ ದೋಚಿದ ಮುಸುಕುಧಾರಿಗಳು
ಮಂಗಳವಾರ, 21 ಏಪ್ರಿಲ್ 2015 (13:14 IST)
ಎಟಿಎಂ ಹಿಂಬದಿಯ ಹಣ ತುಂಬಿಡುವ ಕಪಾಟನ್ನು ಒಡೆದು 2 ಲಕ್ಷಕ್ಕೂ ಹೆಚ್ಚು ಹಣ ದರೋಡೆ ಮಾಡಿದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಸೋಮವಾರ ನಡೆದಿದೆ.
ಸೋಮವಾರ ಮಧ್ಯರಾತ್ರಿ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಎಂಬ ಗ್ರಾಮದಲ್ಲಿನ ಗೋಣಿಕೊಪ್ಪ - ಹುಣಸೂರು ಮುಖ್ಯರಸ್ತೆಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಎಟಿಎಂಗೆ ನುಗ್ಗಿದ ಮುಸುಕುಧಾರಿಗಳು ಈ ಕುಕೃತ್ಯವನ್ನು ನಡೆಸಿದ್ದಾರೆ.
ದರೋಡೆ ಮಾಡಿದ ದೃಶ್ಯಗಳು ಎಟಿಎಂ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಎಟಿಎಂನಲ್ಲಿರುವ ಸುಮಾರು 2.67 ಲಕ್ಷ ರೂಪಾಯಿ ಇತ್ತೆಂದು ಹೇಳಲಾಗುತ್ತಿದೆ.
ಪಿರಿಯಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ್ದಾರೆ.
ಪಂಚವಳ್ಳಿ ಗ್ರಾಮವಾಗಿದ್ದರಿಂದ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಅವಶ್ಯಕವಿಲ್ಲವೆಂದು ಬಗೆದ ಬ್ಯಾಂಕಿನವರು ಸೆಕ್ಯೂರಿಟಿ ಗಾರ್ಡ್ನನ್ನು ನೇಮಕಮಾಡಿರಲಿಲ್ಲ ಎಂದು ತಿಳಿದು ಬಂದಿದೆ.