ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನಲ್ಲಿ ಬಂದ್ ಆಚರಣೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿದ್ದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಗುಂಪು ಘರ್ಷಣೆಯಲ್ಲಿ ವಿಎಚ್ಪಿ ಮುಖಂಡ ಕುಟ್ಟಪ್ಪ ಎಂಬವರು ತೀವ್ರ ಗಾಯಗಳಿಂದ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. 2 ಗುಂಪುಗಳ ಘರ್ಷಣೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ ಕೆಲವರಿಗೆ ಗಾಯಗಳಾಗಿತ್ತು.
ವಿಎಚ್ಪಿ ಮುಖಂಡ ಕುಟ್ಟಪ್ಪ ಮತ್ತು ಇನ್ನೂ ಮೂವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತಲೆಗೆ ತೀವ್ರ ಗಾಯವಾಗಿದ್ದ ಕುಟ್ಟಪ್ಪ ದುರಂತ ಸಾವನ್ನಪ್ಪಿದ್ದು, ಕೊಡಗಿನಲ್ಲಿ ಉದ್ವಿಗ್ನ ಪರಿಸ್ಥಿತಿ ಮೂಡಿದೆ. ಒಂದು ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ. ಪೊಲೀಸರ ನಿರ್ಲಕ್ಷ್ಯದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದ್ದು ಪೊಲೀಸರು ಮುಂಜಾಗ್ರತಾ ಕ್ರಮ ಮುಂಚೆಯೇ ಕೈಗೊಂಡಿದ್ದರೆ ಇಷ್ಟು ದೊಡ್ಡ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಜನರ ಅಭಿಪ್ರಾಯವಾಗಿದೆ. ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನ ಬಂದ್ಗೆ ಪರ, ವಿರೋಧ ತೀವ್ರ ಸ್ವರೂಪ ಪಡೆದು ಎರಡು ಕೋಮುಗಳ ನಡುವೆ ಘರ್ಷಣೆಗೆ ನಾಂದಿಯಾಯಿತು.