ಯದುವೀರ್ ಕೃಷ್ಣರಾಜ ಒಡೆಯರ್ ಅವರ ಸಂಸ್ಥಾನದ 27ನೇ ರಾಜರಾಗಿ ಆಯ್ಕೆಯಾಗಿದ್ದು, ನಾಳೆ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದು, ಇಂದು ತಮ್ಮ ರಾಜಮಾತೆ ಪ್ರಮೋದಾದೇವಿ ಅವರಿಗೆ ಯದುವೀರ್ ಪಾದ ಪೂಜೆ ಮಾಡಿದರು.
ಅರಮನೆಯಲ್ಲಿ 40 ವರ್ಷಗಳ ಬಳಿಕ ಈ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು, ಇಂದಿನಿಂದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಹೋಮ ಹವನಗಳು ಆರಂಭವಾಗಿದ್ದು, ಮೊದಲ ಹಂತವಾಗಿ ಘಣಪತಿಯನ್ನು ಪೂಜಿಸುವ ಮೂಲಕ ಯಾವುದೇ ವಿಜ್ಞಗಳಿಲ್ಲದಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪ್ರಮೋದಾದೇವಿ ಅವರ ಪಾದಪೂಜೆ ಇತರೆ ಪೂಜೆ, ಹೋಮ, ಹವನಗಳು ಸೇರಿದಂತೆ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷತೆ:
ಅರಮನೆ ಆವರಣವು ದಸರಾ ಉತ್ಸವದಂತೆಯೇ ಕಂಗೊಳಿಸುತ್ತಿದ್ದು, ಇಂದು ನಸುಕಿನ ವೇಳೆ 4.30ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಅರಮನೆ ಪುರೋಹಿತರಿಂದ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಿತು. ಬಳಿಕ ಯುವರಾಜ ಯದುವೀರ್ಗೆ ಎಣ್ಣೆಸ್ನಾನ ಹಾಗೂ ಮಂಗಳಸ್ನಾನ ಮಾಡಿಸಲಾಯಿತು. ಬಳಿಕ ಯದುವೀರ್ ಅರಮನೆ ಆವರಣದಲ್ಲಿರುವ ಪಿಳ್ಳೆ ವೆಂಕಟರಮಣ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. ಬಳಿಕ ರಾಜ ಪುರೋಹಿತ ಹೋಮ-ಹವನಗಳು ನಡೆದು ಯುವರಾಜನಿಗೆ ಆಶೀರ್ವದಿಸಲಾಯಿತು.
ಇದೇ ವೇಳೆ, ರಾಣಿ ಪ್ರಮೋದದೇವಿ ಒಡೆಯರ್ ಅವರಿಗೆ ಯದುವೀರ್ ಪಾದಪೂಜೆ ನೆರವೇರಿಸಿದರು. ಈ ವೇಳೆ ರಾಣಿ ಪ್ರಮೋದಾದೇವಿ ತಮ್ಮ ಪತಿ ಶ್ರಕಂಠದತ್ತ ಒಡೆಯರ್ ಅವರನ್ನು ನೆನೆದು ಭಾವುಕರಾದರು. ಬಳಿಕ ಯದುವೀರರಿಗೆ ಮುತ್ತೈದೆಯರಿಂದ ಗಂಗಾಪೂಜೆ ನೆರವೇರಿಸಿದ ಬಳಿಕ ಯದುವೀರರನ್ನು ಬೆಳ್ಳಿ ಪೀಠದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.