ನಾಳೆ ಸಮಸ್ತ ಕನ್ನಡಿಗರಿಂದ ಶಕ್ತಿ ಪ್ರದರ್ಶನ: ವಾಟಾಳ್ ನಾಗರಾಜ್

ಶುಕ್ರವಾರ, 17 ಏಪ್ರಿಲ್ 2015 (17:11 IST)
ಕನ್ನಡ ಒಕ್ಕೂಟ ನೀಡಿದ ಕರ್ನಾಟಕ ಬಂದ್ ಕರೆಗೆ ಸಮಸ್ತ ಆರು ಕೋಟಿ ಜನತೆಯ ಬೆಂಬಲ ಸೂಚಿಸಿದ್ದಾರೆ. ನಾಳೆ ಸಮಸ್ತ ಕನ್ನಡಿಗರಿಂದ ಶಕ್ತಿ ಪ್ರದರ್ಶನವಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಹೇಳಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ಅನಗತ್ಯವಾಗಿ ತಮಿಳುನಾಡು ಸರಕಾರ ಅಡ್ಡಗಾಲು ಹಾಕುತ್ತಿದೆ. ಮೇಕೆದಾಟು ಯೋಜನೆ ಜಾರಿಯಾಗಲೇಬೇಕು ಎಂದು ರಾಜ್ಯದ ಸಮಸ್ತ ಜನತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಟೋ ರಿಕ್ಷಾ ಚಾಲಕರು, ವ್ಯಾಪಾರಿಗಳು ಲಾರಿ ಮಾಲೀಕರು, ಸಿನಿಮಾ ಮಾಲಿಕರು, ಕೆಎಸ್‌ಆರ್‌ಟಿಸಿ ನೌಕರರು, ಸರಕಾರಿ ನೌಕರರ ಸಂಘ, ಪೆಟ್ರೋಲ್ ಬಂಕ್ ಮಾಲೀಕರು ಸೇರಿದಂತೆ ಅನೇಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಯಾವುದೇ ಕಾರಣಕ್ಕೂ ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಗೆ ಒಂದು ತೊಟ್ಟು ಪೆಟ್ರೋಲ್ ನೀಡಬಾರದು ಎಂದು ಮನವಿ ಮಾಡಿದರು.   

ಸಾಹಿತಿಗಳಲ್ಲಿ ಚಂದ್ರಶೇಖರ್ ಪಾಟೀಲ್, ಪಾಟೀಲ್ ಪುಟ್ಟಪ್ಪ, ಸಿನೆಮಾ ನಟರಾದ ಶಿವರಾಜ್ ಕುಮಾರ್, ಪ್ರೇಮ್, ಸುದೀಪ್ ಕೂಡಾ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ