ಟ್ರ್ಯಾಕ್ಟರ್ ಪಲ್ಟಿ: ಮೂವರು ಸಾವು, ನಾಲ್ವರಿಗೆ ಗಾಯ

ಶನಿವಾರ, 28 ಮಾರ್ಚ್ 2015 (15:49 IST)
ಚಲುಸುತ್ತಿದ್ದ ಟ್ರ್ಯಾಕ್ಟರ್‌ವೊಂದು ಪಲ್ಟಿ ಹೊಡೆದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಲೋಕದಾಳು ಗ್ರಾಮದ ಬಳಿ ನಡೆದಿದೆ. 
 
ಮೃತರನ್ನು ಕಂಬೇಶ್(45), ನಟರಾಜು(50) ಮತ್ತು ಈಶ್ವರಪ್ಪ(60) ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ ಕೂಡ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ಮೂಲದವರು ಎಂದು ಹೇಳಲಾಗಿದೆ.  
 
ಪ್ರಕರಣದ ಹಿನ್ನೆಲೆ: ಇಂದು ಶ್ರೀರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಹಲವು ಮಂದಿ ಟ್ರ್ಯಾಕ್ಟರ್‌ನಲ್ಲಿ ರಂಗಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಟ್ರ್ಯಾಕ್ಟರ್ ಕಣಿವೆ ಪ್ರದೇಶವಾದ ಲೋಕದಾಳು ಬಳಿ ಸಾಗುತ್ತಿತ್ತು ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. 
 
ಘಟನೆಯಲ್ಲಿ ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  
 
ಘಟನಾ ಸ್ಥಳವನ್ನು ಪರಿಶೀಲಿಸಿರುವ ಹೊಳಲ್ಕೆರೆ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ