ದ್ವಿಚಕ್ರವಾಹನದಲ್ಲಿ ಬಂದ ಆರೋಪಿಗಳಿಂದ ಕಲಬುರ್ಗಿ ಹತ್ಯೆ: ಪೊಲೀಸ್ ಆಯುಕ್ತ

ಭಾನುವಾರ, 30 ಆಗಸ್ಟ್ 2015 (12:09 IST)
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಧಾರವಾಡ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ. 
 
ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದ್ದು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ. ಹತ್ಯೆಗೆ ಯಾವುದೇ ಕಾರಣಗಳು ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
 
ಇಂದು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಕಲ್ಯಾಣ ನಗರದಲ್ಲಿರುವ ಅವರ ನಿವಾಸಕ್ಕೆ ನುಗ್ಗಿದ ಶಸ್ತ್ರಾಸ್ತರಸಹಿತ ಯುವಕನೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಎರಡು ಬುಲೆಟ್'ಗಳು ತಲೆಗೆ ಹೊಕ್ಕಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದರು.
 
ದಾಳಿ ನಡೆಸಿದ ಯುವಕ ಯಾರು ಹಾಗೂ ಅವನು ಯಾವ ಕಾರಣಕ್ಕಾಗಿ ದಾಳಿ ನಡೆಸಿದ ಎಂಬ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇದೀಗ ಡಾ. ಕಲಬುರಗಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.
 
ಈ ಮೊದಲೂ ಕಲಬುರಗಿಯವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಅಹಿತಕರ ಘಟನೆ ಸಂಭವಿಸಿತ್ತು ಹೀಗಾಗಿ ಅವರ ನಿವಾಸಕ್ಕೆ ಪೋಲೀಸ್ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ