ಪ್ರವಾಸದಲ್ಲಿ ನೀರುಪಾಲಾದ ವಾರ್ಡನ್, ವಿದ್ಯಾರ್ಥಿ

ಗುರುವಾರ, 2 ಏಪ್ರಿಲ್ 2015 (18:16 IST)
ಹಾಸನ ಜಿಲ್ಲೆಯ ಸಕಲೇಶಪುರ ಶಾಲೆಯಿಂದ ಪ್ರವಾಸಕ್ಕೆ ಬಂದಿದ್ದ ಓರ್ವ ವಿದ್ಯಾರ್ಥಿ ಹಾಗೂ ವಾರ್ಡನ್ ಇಬ್ಬರೂ ನೀರು ಪಾಲಾಗಿರುವ ಘಟನೆ ಇಂದು ಜಿಲ್ಲೆಯ ಸೋಮವಾರಪೇಟೆ ಬಳಿ ಇರುವ ಜಲಪಾತವೊಂದರ ಬಳಿ ನಡೆದಿದೆ. 
 
ನೀರುಪಾಲಾಗಿ ಮೃತಪಟ್ಟವರನ್ನು ವಿದ್ಯಾರ್ಥಿ ಮದನ್ ಗೋಪಾಲ್(13) ಹಾಗೂ ವಾರ್ಡ‌ನ್ ಶಿವಕುಮಾರ್(32) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕೂಡ ಹಾಸನ ಜಿಲ್ಲೆಯ ಸಕಲೇಶಪುರದ ಮೂಲದವರಾಗಿದ್ದಾರೆ. 
 
ಹಾಸನದ ಸಕಲೇಶಪುರದ ಬಾಗೆ ಗ್ರಾಮದಲ್ಲಿರುವ ಜೆಎಸ್ಎಸ್ ವಸತಿ ಶಾಲೆ ವತಿಯಿಂದ ಸುಮಾರು 60 ಮಕ್ಕಳೊಂದಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಜಲಪಾತದ ಸೌಂದರ್ಯವನ್ನು ವೀಕ್ಷಿಸುತ್ತಿದ್ದಾಗ ವಿದ್ಯಾರ್ಥಿ ಮದನ್ ಗೋಪಾಲ್ ಆಯ ತಪ್ಪಿ ಜಲಪಾತಕ್ಕೆ ಬಿದ್ದಿದ್ದಾನೆ. ಇದನ್ನು ಕಂಡ ವಾರ್ಡನ್ ಶಿವಕುಮಾರ್, ವಿದ್ಯಾರ್ಥಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ರಕ್ಷಿಸುವಲ್ಲಿ ವಿಫಲವಾಗಿರುವ ವಾರ್ಡನ್ ಕೂಡ ಸಾವನ್ನಪ್ಪಿದ್ದಾರೆ. 
 
ಮೃತರ ದೇಹಪತ್ತೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಈಗಾಗಲೇ ವಾರ್ಡನ್ ದೇಹ ಪತ್ತೆಯಾಗಿದೆ. ಆದರೆ ವಿದ್ಯಾರ್ಥಿಯ ದೇಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. 
 
ಪ್ರಕರಣ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ