ಶಿಂಷಾ ನದಿಗೆ ಕಟ್ಟಲಾಗಿರುವ ಸೇತುವೆಯಿಂದ 50 ಅಡಿ ಆಳದಿಂದ ಕೆಎಸ್ಆರ್ಟಿಸಿ ಬಸ್ ಉರುಳಿಬಿದ್ದ ಘೋರ ಘಟನೆಯಿಂದ ಅನೇಕ ಮಂದಿಗೆ ಗಂಭೀರ ಗಾಯಗಳಾಗಿದ್ದು, ಸತ್ತವರ ನಿಖರ ಸಂಖ್ಯೆ ತಿಳಿದುಬಂದಿಲ್ಲ. ರಾಮನಗರದಿಂದ ಮೈಸೂರು ಕಡೆ ತೆರಳುತ್ತಿದ್ದ ಹೆಬ್ಬೆರಳು ಗ್ರಾಮದ ನಿವಾಸಿ ರಾಮಕೃಷ್ಣ ಎಂಬವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಬಸ್ನಲ್ಲಿ 36 ಪ್ರಯಾಣಿಕರಿದ್ದರು. ಅಪಘಾತದಿಂದ ಕೆಲವರು ಕೋಮಾ ಸ್ಥಿತಿಯಲ್ಲಿದ್ದು, ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ.
ಕ್ರೇನ್ ಮುಖಾಂತರ ಬಸ್ಸನ್ನು ಮೇಲಕ್ಕೆತ್ತುವ ಪ್ರಕ್ರಿಯೆ ನಡೆಯುತ್ತಿದ್ದು, ಬಸ್ನಲ್ಲಿ ಒಟ್ಟು 36 ಜನರಿದ್ದು, ಸುಮಾರು 20 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಒಂದು ಸಾವು ಸಂಭವಿಸಿದೆಯೆಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ಅಪಘಾತವಾಯಿತೆಂದು ತಮ್ಮ ಗಮನಕ್ಕೆ ತರುವಂತೆ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಕೆಎಸ್ಸಾರ್ಟಿಸಿ ಎಂಡಿ ರಾಜೇಂದ್ರ ಕಠಾರಿಯಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ವೇಗವಾಗಿ ಬಸ್ ಚಲಾಯಿಸುತ್ತಿದ್ದು ಟೈರ್ ಸ್ಫೋಟಗೊಂಡಿದ್ದರಿಂದ ಟೈರ್ ಸ್ಫೋಟಗೊಂಡಿದ್ದರಿಂದ ಬಸ್ಸು ತಡೆಗೋಡೆಗೆ ಡಿಕ್ಕಿಹೊಡೆದು 50 ಅಡಿ ಆಳದಲ್ಲಿದ್ದ ನದಿಗೆ ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮದ್ದೂರು ತಾಲೂಕು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರು ಪ್ರಯಾಣಿಕರ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲವೆಂದು ಎಸ್ಪಿ ಸುಧೀರ್ಕುಮಾರ್ ಹೇಳಿದ್ದಾರೆ.