ಮತ್ತೆ ಮರ್ಯಾದಾ ಹತ್ಯೆ? : ಧಾರವಾಡದಲ್ಲಿ ಹದಿಹರೆಯದ ಪ್ರೇಮಿಗಳ ಕೊಲೆ

ಸೋಮವಾರ, 15 ಸೆಪ್ಟಂಬರ್ 2014 (16:54 IST)
ಹದಿಹರೆಯದ ಪ್ರೇಮಿಗಳನ್ನು ಹುಡುಗಿಯ ಚಿಕ್ಕಪ್ಪನೇ ಕೊಲೆಗೈದ ಅಮಾನುಷ ಘಟನೆ ಧಾರವಾಡ ತಾಲ್ಲೂಕಿನ ಶಿವಾಲಿ ಎಂಬ ಗ್ರಾಮದಲ್ಲಿ ನಡೆದಿದ್ದು, ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪರಷ್ಪರ ಪ್ರೀತಿಸುತ್ತಿದ್ದ 17 ವರ್ಷದ ಯುವತಿ ಮತ್ತು 19 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಂದು ಹಾಕಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 
 
10 ನೇ ತರಗತಿಯಲ್ಲಿ ಓದುತ್ತಿದ್ದ ನೀಲಮ್ಮಾ ಲಕ್ಕಮ್ಮನವರ್ ಮತ್ತು  ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ತ್ಯಜಿಸಿರುವ  ಮಹೇಶ್ ನೈಕರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
 
ಪ್ರೇಮಿಗಳಿಬ್ಬರು ಜತೆಗಿರುವುದನ್ನು ನೋಡಿದ ಹುಡುಗಿಯ ಚಿಕ್ಕಪ್ಪ ರಂಗಪ್ಪ ಲಕ್ಕಮ್ಮನವರ್ ಇಬ್ಬರ ಮೇಲೂ ಮಾರಕ ಆಯುಧಗಳಿಂದ ದಾಳಿ ಮಾಡಿದ್ದಾನೆ. ಮೃತ ನೀಲಮ್ಮಾ ಮನೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಧಾರವಾಡ ಗ್ರಾಮೀಣ ಪೊಲೀಸ್ ಉಪ ಮೇಲ್ವಿಚಾರಕರಾದ ಕಲ್ಲಪ್ಪಾ ಹಂದಿಬಾಗ್ ತಿಳಿಸಿದ್ದಾರೆ. 
 
ನೀಲಮ್ಮಾ ಕುರುಬ ಸಮುದಾಯಕ್ಕೆ ಸೇರಿದ್ದರೆ, ಮಹೇಶ್ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದ. ಅವರಿಬ್ಬರ ಪ್ರೇಮ ಸಂಬಂಧಕ್ಕೆ ಹುಡುಗಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಸಂಬಂಧವನ್ನು ಕೊನೆಗೊಳಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ಅವರಿಬ್ಬರು ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರು. ಇದು ಹುಡುಗಿಯ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು. 
 
ಅವರಿಬ್ಬರು ಮನೆ ಒಳಗೆ ಇರುವುದನ್ನು ತಿಳಿದ ಹುಡುಗಿಯ ಚಿಕ್ಕಪ್ಪ ರಂಗಪ್ಪ ಕುಡಗೋಲು ಮತ್ತು ಕಬ್ಬಿಣದ ರಾಡ್‌ನಿಂದ ಅವರಿಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ವೆಬ್ದುನಿಯಾವನ್ನು ಓದಿ