ಯಡಿಯೂರಪ್ಪನವರ ಹಿತ್ತಾಳೆ ಕಿವಿಯೇ ಸಮಸ್ಯೆಗೆ ಕಾರಣ: ವಿ.ಸೋಮಣ್ಣ

ಶುಕ್ರವಾರ, 20 ಜನವರಿ 2017 (14:22 IST)
ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಹಿತ್ತಾಳೆ ಕಿವಿಯೇ ಸಮಸ್ಯೆಗೆ ಕಾರಣ ಎಂದು ದೂರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರ ಹಿತ್ತಾಳೆ ಕಿವಿಯೇ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಕುರಿತು ಸ್ಪಷ್ಟನೆ ಬೇಕಿದ್ದರೆ ಧವಳಗಿರಿಗೆ ಬಂದು ಕೇಳಿ. ಬಿಎಸ್‌ವೈ ತಮ್ಮ ಮನೆ ಸುತ್ತಮುತ್ತಲಿನ ನಾಲ್ಕೈದು ಜನರ ಮಾತು ಕೇಳುತ್ತಿದ್ದಾರೆ. ನಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
 
ಬಿಜೆಪಿ ಪಕ್ಷ ನಮಗೆ ತಾಯಿ ಇದ್ದಂತೆ. ನನಗೆ ಎಲ್ಲವನ್ನು ನೀಡಿರುವ ಪಕ್ಷಕ್ಕೆ ದ್ರೋಹ ಬಗೆಯಲ್ಲ. ನಾನು ಇದ್ದಲೇ ಇರುತ್ತೇನೆ. ಬಿಜೆಪಿ ಪಕ್ಷ ದೇಶಕ್ಕೆ ಹಾಗೂ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಇಂತಹ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. 
 
ತಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಆದರೆ, ಈ ಸುದ್ದಿಗಳು ಸುಳ್ಳು ಎನ್ನಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ವಿ.ಸೋಮಣ್ಣ ಅವರು ನಿನ್ನೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ