ಬೇಸಿಗೆ ಹಿನ್ನೆಲೆಯಲ್ಲಿ ರಾಜಧಾನಿಯ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುವಲ್ಲಿ ತೊಂದರೆಯುಂಟಾದಲ್ಲಿ ದೆಹಲಿಯ ಗಣ್ಯರಿಗೆ ನೀರನ್ನು ಕಡಿತಗೊಳಿಸುವುದಾಗಿ ತಿಳಿಸಿರುವ ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೀರಿನ ಮಿತ ಬಳಕೆ ಬಗ್ಗೆ ಗಣ್ಯರಿಗೆ ಮುನ್ಸೂಚನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಧಾನಿಯಲ್ಲಿ ಬೇಸಿಗೆ ಆವರಿಸುವ ಕಾರಣ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದಲ್ಲಿ ಇಲ್ಲಿನ ಗಣ್ಯರಿಗೆ ಪೂರೈಕೆ ಮಾಡಲಾಗುವ ನೀರನ್ನು ಕಡಿತಗೊಳಿಸಲಾಗುವುದು. ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ರಾಯಭಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಇಲ್ಲಿನ ಎಲ್ಲಾ ವಿಐಪಿಗಳೂ ಈ ಬೇಗೆಯನ್ನು ಸಹಿಸಿಕೊಳ್ಳಬೇಕು ಎಂದಿದ್ದಾರೆ.
ಇದೇ ವೇಳೆ, ನೀರಿನ ಮೇಲೆ ರಾಜಕೀಯ ಮಾಡಬಾರದು. ಈ ವರ್ಷ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಆ ತೊಂದರೆ ಎಲ್ಲರೂ ಅನುಭವಿಸುವ ಹಾಗೆ ದೆಹಲಿ ಜಲ ಮಂಡಳಿ ನೋಡಿಕೊಳ್ಳಲಿದೆ. ಈ ವ್ಯತ್ಯಯದಲ್ಲಿ ನನ್ನನ್ನೂ ಸೇರಿದಂತೆ ಎಲ್ಲಾ ವಿಐಪಿಗಳೂ ಅನುಭವಿಸಲಿದ್ದಾರೆ ಎಂದರು.