ಜೆಡಿಎಸ್ ಬಿಟ್ಟು ಕೊಟ್ಟಿದ್ದ ಕಚೇರಿಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನಿಂಬೆ ಹಣ್ಣು ಹಾಗೂ ಬಟ್ಟೆ ಸಿಗುತ್ತಿದ್ದು, ಶೀಘ್ರದಲ್ಲಿಯೇ ನಾವೂ ಕೂಡ ಹೋಮ ಹವನಗಳನ್ನು ಮಾಡಿಸಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ಅಧ್ಯಕ್ಷ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್ ನಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದ ಪಕ್ಷದ ಕಚೇರಿಯನ್ನು ಸ್ವಚ್ಛಗೊಳಿಸಲೆಂದು ನಮ್ಮ ಕಾರ್ಯಕರ್ತರು ತೆರಳಿದ್ದರು. ಆ ಸಂಧರ್ಭದಲ್ಲಿ ಎಲ್ಲಿ ಮುಟ್ಟಿದರೂ ಕೂಡ ನಿಂಬೆಹಣ್ಣು ಹಾಗೂ ಮಂತ್ರದ ಬಟ್ಟೆ ಸಿಗುತ್ತಿತ್ತು ಎಂದು ಹೇಳಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನಾವೂ ಕೂಡ ಹೋಮ, ಹವನಗಳನ್ನು ಮಾಡಿಸುವ ಅಗತ್ಯವಿದೆ ಎಂದು ಕಾರ್ಯಕರ್ತರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಾವೂ ಕೂಡ ಹೋಮ ಹಾಗೂ ಹವನಗಳನ್ನು ಮಾಡಿಸುತ್ತೇವೆ ಎಂದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ನಾವು ಅಂತಹ ಕೃತ್ಯಗಳನ್ನು ಎಸಗುವವರಲ್ಲ. ನಮಗೆ ಆಗದ ವ್ಯಕ್ತಿಗಳು ಈ ಕೆಲವನ್ನು ಮಾಡಿದ್ದು, ನಮ್ಮ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.