ನಾವು ಕಾಂಗ್ರೆಸ್ ಪಕ್ಷದ ಮಾನವ ಬಾಂಬರ್‌ಗಳಂತೆ: ಮಾಜಿ ಸಚಿವ ವಿಶ್ವನಾಥ್ ವಾರ್ನಿಂಗ್

ಬುಧವಾರ, 24 ಫೆಬ್ರವರಿ 2016 (14:16 IST)
ನಮ್ಮಂತಹವರು ಕಾಂಗ್ರೆಸ್ ಪಕ್ಷದ ಮಾವ ಬಾಂಬರ್‌ಗಳಂತೆ. ಪಕ್ಷವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ ಯಾವ ಕ್ಷಣದಲ್ಲಾದರೂ ಸಹ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
 
ವಸತಿ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಕೋಟಿ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಆದರೆ, ಆ ಇಲಾಖೆಯ ಮಂತ್ರಿ ಬಾಯಿ ಬಿಡುವುದಿಲ್ಲ. ಇಂತಹವರಿಂದ ಸರಕಾರದ ಸಾಧನೆ ಪ್ರಚಾರ ಹೇಗೆ?ವಸತಿ ಇಲಾಖೆ ಸಚಿವ ಅಂಬರೀಷ್ ವಿರುದ್ಧ ಮಾಜಿ ಸಂಸದ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಪ್ರಸ್ತುತವಿರುವ ಸಚಿವರನ್ನು ಮುಂದುವರಿಸಿದರೆ ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ಬರುವುದಿಲ್ಲ. ಇಂತಹವರನ್ನು ಇಟ್ಟುಕೊಂಡಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಒಂದು ವೇಳೆ, ಚುನಾವಣೆ ಎದುರಿಸಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ನಮ್ಮಲ್ಲಿ ಒಳ್ಳೆಯದಕ್ಕೂ ಸಿಎಂ ಬೇಕು. ಕೆಟ್ಟದಕ್ಕು ಸಿಎಂ ಬೇಕು. ಅಧಿಕಾರದಲ್ಲಿರುವ ಸಚಿವರುಗಳಿಗೆ ತಮ್ಮ ಕ್ಷೇತ್ರಗಳೇ ಪ್ರತ್ಯೇಕ ರಾಜ್ಯಗಳಾಗಿವೆ. ಇತರ ಕ್ಷೇತ್ರಗಳತ್ತ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಉಡುಗೊರೆಯಾಗಿ ನೀಡಿದ ವಾಚ್‌ನ್ನು ಕ್ಯಾಬಿನೆಟ್ ಹಾಲ್‌ನಲ್ಲಿಡಲಿ. ಮುಂದಿನ ಸಿಎಂ ಅದನ್ನು ಕಟ್ಟಿಕೊಳ್ಳಲಿ. ಯುವಕರಿಗೆ ಮುಖ್ಯಮಂತ್ರಿಗಳು ಮಾದರಿಯಾಗಿರಬೇಕು. ಅದನ್ನು ಬಿಟ್ಟು ದುಬಾರಿ ವಾಚ್ ಕಟ್ಟಿಕೊಂಡು ತಿರುಗುವುದು ಸರಿಯಲ್ಲ ಎಂದು  ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಚ್.ವಿಶ್ವನಾಥ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ