ಯಡಿಯೂರಪ್ಪ ವಿರುದ್ಧ ಹುಲಿ ಮೀಸಲು ಅರಣ್ಯ ಭೂಮಿ ಕಬಳಿಕೆ ಆರೋಪ ಮಾಡಲಾಗಿದೆ. ಧವಳಗಿರಿ ಎಸ್ಟೇಟ್ ಹೆಸರಿನಲ್ಲಿ ಯಡಿಯೂರಪ್ಪ ಅರಣ್ಯ ಭೂಮಿಯನ್ನು ನೋಂದಣಿ ಮಾಡಿದ್ದರು. ಪ್ರಾಸಿಕ್ಯೂಷನ್ ಅನುಮತಿ ಪಡೆದಿಲ್ಲ ಎಂಬ ಕಾರಣದಿಂದ ನಾಲ್ವರ ವಿರುದ್ಧ ಆರೋಪ ಶಿವಮೊಗ್ಗ ನ್ಯಾಯಾಲಯ ತಳ್ಳಿಹಾಕಿದಾಗ ನಾಲ್ವರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಪ್ರಾಸಿಕ್ಯೂಷನ್ ಅನುಮತಿ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿ ಕೆಳನ್ಯಾಯಾಲಯದ ತೀರ್ಪನ್ನು ವಜಾ ಮಾಡಿ ತನಿಖೆಗೆ ಆದೇಶಿಸಿದೆ.
ಏತನ್ಮಧ್ಯೆ ಯಡಿಯೂರಪ್ಪ ಈ ಕುರಿತು ಪ್ರತಿಕ್ರಿಯಿಸಿ, 55-56 ಎಕರೆ ಅರಣ್ಯ ಇಲಾಖೆಗೆ ಸೇರಿದ್ದು ಎನ್ನುವುದು ಸತ್ಯಕ್ಕೆ ದೂರವಾದದ್ದು, ಇದನ್ನು ಬೇರೆಯವರಿಂದ ತೆಗೆದುಕೊಂಡಿದ್ದು. ಅರಣ್ಯ ಇಲಾಖೆ ಕೂಡ ಇದು ಅರಣ್ಯ ಭೂಮಿಯಲ್ಲ ಎಂದು ಹೇಳಿದೆ. ಇಷ್ಟಾದರೂ ಕೂಡ ತನಿಖೆಗೆ ಆದೇಶಿಸಿರುವುದರಿಂದ ತಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 67 ಎಕರೆ ಜಮೀನನ್ನು ಬೇನಾಮಿ ಹೆಸರಲ್ಲಿ ಕೊಂಡುಕೊಂಡು ಅದನ್ನು ಗಾರ್ಮೆಂಟ್ ಕೈಗಾರಿಕೆಗೆ ಭೂಪರಿವರ್ತನೆ ಮಾಡಿಕೊಂಡು ನಂತರ ಧವಳಗಿರಿ ಎಸ್ಟೇಟ್ಗೆ ರಿಜಿಸ್ಟರ್ ಮಾಡಿದ್ದರು. ವಕೀಲ ವಿನೋದ್ ಅವರು ಈ ಕುರಿತು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೆಳ ನ್ಯಾಯಾಲಯ ಕೇಸ್ ವಜಾಮಾಡಿದ್ದರಿಂದ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.
ಈಶ್ವರಪ್ಪ ಅವರು ಸಾವಿರಾರು ಕೋಟಿ ಆದಾಯ ಮೀರಿ ಗಳಿಸಿ ಬೇರೆ ಬೇರೆ ದೇಶಗಳಲ್ಲಿ ಶೇಖರಿಸಿಟ್ಟಿರುವ ಅಕ್ರಮ ಆಸ್ತಿ ಬಗ್ಗೆ ಶಿವಮೊಗ್ಗ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದು ಕೂಡ ಪ್ರಾಸಿಕ್ಯೂಷನ್ ಅನುಮತಿ ಇಲ್ಲದಿರುವುದರಿಂದ ವಜಾ ಮಾಡಲಾಗಿತ್ತು. ಮಾನವ ಹಕ್ಕು ಆಯೋಗದ ಸದಸ್ಯರಾಗಿರುವ ಮೀರಾ ಸಕ್ಸೇನಾ ಅರಣ್ಯ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ಸಂದರ್ಭದಲ್ಲಿ ಮಂಡಗದ್ದೆ ಗ್ರಾಮದಲ್ಲಿ ಅಕ್ರಮ ಮರ ಸಾಗಣೆಗೆ ಅನುಮತಿ ನೀಡಿದ್ದರು.