ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಸರ್ಕಾರದ ಕ್ರಮವೇನು: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಶುಕ್ರವಾರ, 10 ಏಪ್ರಿಲ್ 2015 (16:55 IST)
2014ರ ಕೆಪಿಎಸ್‌ಸಿ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.  
 
ಇಂದು ವಿಚಾರಣೆಯನ್ನು ನಡೆಸಿದ ವಿಭಾಗೀಯ ಪೀಠ, ಕಳೆದ 10 ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಇದರಿಂದ ಸಾರ್ವಜನಿಕರಿಗೆ ಕೆಪಿಎಸ್‌ಸಿ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಸರ್ಕಾರವನ್ನು ಪ್ರಶ್ನಿಸಿತು. ಇದೇ ವೇಳೆ, ಕೆಪಿಎಸ್ ಸಿಯ ಎಲ್ಲಾ ಕೊಳಕುಗಳನ್ನು ಕ್ಲೀನ್ ಮಾಡಿ ಎಂದೂ ಕೂಡ ಸೂಚಿಸಿತು. 
 
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಅಗತ್ಯ ದಾಖಲೆಗಳೆಲ್ಲವನ್ನೂ ತಂದು ಮುಂದಿನ ವಿಚಾರಣೆಯಲ್ಲಿ ಸಂಪೂರ್ಣವಾಗಿ ಉತ್ತರಿಸುವುದಾಗಿ ತಿಳಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಕೋರ್ಟ್, ಏಪ್ರಿಲ್ 15ಕ್ಕೆ ವಿಚಾರಣೆಯನ್ನು ಮುಂದೂಡಿತು. 

ವೆಬ್ದುನಿಯಾವನ್ನು ಓದಿ