ರಾಜ್ಯಪಾಲರ ಹೆಲಿಕಾಪ್ಟರ್ ಲ್ಯಾಂಡಾಗುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿ

ಮಂಗಳವಾರ, 27 ಜನವರಿ 2015 (16:12 IST)
ಸಿದ್ದೇಶ್ವರ ಗ್ರಾಮೀಣ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭಕ್ಕೆಂದು ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಅವರು ನಗರಕ್ಕೆ ಆಗಮಿಸುತ್ತಿದ್ದ ವೇಳೆ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ  ವೇಳೆಯಲ್ಲಿಯೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಆದರೆ ಯಾವುದೇ ಅವಘಡ ಸಂಭವಿಸಿಲ್ಲ. 
 
ಸಮಾರಂಭಕ್ಕೆಂದು ರಾಜ್ಯಪಾಲ ವಾಲಾ ಅವರಿಗೆ ಸಿದ್ದೇಶ್ವರ ಬ್ಯಾಂಕ್ ವತಿಯಿಂದ ವಿಶೇಷ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ರಾಜ್ಯಪಾಲರು ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಹೆಲಿಕಾಪ್ಟರ್ ಇನ್ನೇನು ಲ್ಯಾಂಡ್ ಆಗಬೇಕು ಎಂಬಷ್ಟರಲ್ಲಿ ಹೆಲಿಪ್ಯಾಡ್ ಪಕ್ಕದಲ್ಲಿಯೇ ಇದ್ದ ಮರಗಳ ಪಕ್ಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಆದರೆ ತಕ್ಷಣವೇ ಎಚ್ಚರಗೊಂಡ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. 
 
ಬಳಿಕ ಮೇಲುಸ್ತುವಾರಿ ವಹಿಸಿದ್ದ ಅಧಿಕಾರಿಗಳು ಮಾತನಾಡಿ, ಘಟನೆಯು ಆಕಸ್ಮಿಕವಾಗಿ ಸಂಭವಿಸಿತ್ತಾದರೂ ನಂದಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಯಾವುದೇ ಅವಘಡ ಸಂಭವಿಸಿಲ್ಲ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ