ಸಾರಾಯಿ ನಿಷೇಧ ಹಿಂಪಡೆಯುವುದಿಲ್ಲ: ಸಿದ್ದರಾಮಯ್ಯ

ಸೋಮವಾರ, 30 ಮಾರ್ಚ್ 2015 (17:30 IST)
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಾರಾಯಿ ಮಾರಾಟವಿಲ್ಲ. ಸರ್ಕಾರ ಈಗಾಗಲೇ ಹೊರಡಿಸಿರುವ ಸಾರಾಯಿ ನಿಷೇಧವನ್ನು ಹಿಂಪಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ. 
 
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದಿನ ಸರ್ಕಾರಗಳು ಸಾರಾಯಿ ನಿಷೇಧಿಸಿರುವುದಾಗಿ ಹೇಳಿಕೊಂಡಿದ್ದವು. ಆದರೆ ಅಂದಿನ ಆ ದಿನಗಳಲ್ಲಿ ಅದರ ವಸ್ತುಸ್ಥಿತಿಯೇ ಬೇರೆಯಾಗಿತ್ತು. ಆದರೆ ನಮ್ಮ ಸರ್ಕಾರ ಸಂಪೂರ್ಣವಾಗಿ ನಿಷೇಧಕ್ಕೆ ಮುಂದಾಗಿದ್ದು, ನಿಷೇಧ ಹಿಂಪಡೆಯುವ ಮಾತೇ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಾಯಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸುತ್ತೇವೆ ಎಂದರು. 
 
ಇದೇ ವೇಳೆ ಮಾತನಾಡಿದ ಅವರು, ಈ ಸಂಬಂಧ ಕೆಲ ಮಾಧ್ಯಮಗಳು ಈಗಾಗಲೇ ಪ್ರಕಟಿಸಿರುವುದನ್ನು ನಾನು ಗಮನಿಸಿದ್ದೇನೆ. ಅವುಗಳಲ್ಲಿ ಸಾರಾಯಿ ಭಾಗ್ಯ ಎಂದು ಉಲ್ಲೇಖ ಮಾಡಲಾಗಿದೆ. ಆದರೆ, ನಾನು ಸಾರಾಯಿ ನಿಷೇಧವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹಾಗೆ ಬರೆಯಲಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ