ಪ್ರೇಮ ವಿವಾಹ ವಿಳಂಬ: ಐದನೇ ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ

ಬುಧವಾರ, 2 ಮಾರ್ಚ್ 2016 (17:16 IST)
ಶೀಘ್ರದಲ್ಲಿ ವಿವಾಹವಾಗಲು ಬಾಯ್‌ಫ್ರೆಂಡ್ ನಿರಾಕರಿಸಿದ್ದರಿಂದ ಬೇಸತ್ತ ಯುವತಿಯೊಬ್ಬಳು ಪೂರ್ವ ಬೆಂಗಳೂರಿನ ನಾರಾಯಣಪುರಾ ಪ್ರದೇಶದಲ್ಲಿರುವ ಡಿಆರ್‌ಡಿಓ ಕ್ವಾರ್ಟರ್ಸ್‌ನ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ನೇಹಾ, ಕಳೆದ ಒಂದು ವರ್ಷದಿಂದ ಬಿಕಾಂ ವಿದ್ಯಾರ್ಥಿಯಾದ ವಿಘ್ನೇಶ್‌ನೊಂದಿಗೆ ಪ್ರೇಮಸಂಬಂಧ ಹೊಂದಿದ್ದಳು ಎನ್ನಲಾಗಿದೆ
 
ನೇಹಾ ಮತ್ತು ವಿಘ್ನೇಶ್ ವಿವಾಹವಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿಯ ಬಗ್ಗೆ ನೇಹಾ ಮತ್ತು ವಿಘ್ನೇಶ್ ಕುಟುಂಬದ ಸದಸ್ಯರಿಗೆ ಮಾಹಿತಿಯಿತ್ತು. ಆದರೆ, ವಿಘ್ನೇಶ್ ಪೋಷಕರು ಮೊದಲು ಅಧ್ಯಯನದತ್ತ ಗಮನಹರಿಸಲು ಬಯಸಿದ್ದರು. 
 
ಅಂದಿನಿಂದ ವಿಘ್ನೇಶ್, ನೇಹಾಳನ್ನು ನಿರ್ಲಕ್ಷಿಸಲು ಆರಂಭಿಸಿದ್ದ. ಉಭಯರ ನಡುವೆ ಹಲವು ಬಾರಿ ವಾಗ್ವಾದ ನಡೆದಿದ್ದವು. ಕಳೆದ ಒಂದು ವಾರದಿಂದ ವಿಘ್ನೇಶ್, ನೇಹಾಳ ಕರೆಗಳಿಗೆ ಮತ್ತು ಮ್ಯಾಸೇಜ್‌ಗೆ ಸ್ಪಂದಿಸಿರಲಿಲ್ಲ.
 
ಇದರಿಂದ ಬೇಸತ್ತ ನೇಹಾ, ಸಂಜೆ ಏಳು ಗಂಟೆಗೆ ವಿಘ್ನೇಶ್ ನಿವಾಸಕ್ಕೆ ಬಂದು, ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಬಯಸಿದ್ದಳು. ಆದರೆ , ಇಬ್ಬರ ನಡುವಿನ ಮಾತುಕತೆ ವಾಗ್ವಾದಕ್ಕೆ ತಿರುಗಿತು. ಕೋಪದಲ್ಲಿದ್ದ ನೇಹಾ ಐದನೇ ಮಹಡಿಗೆ ತೆರಳಿ ಅಲ್ಲಿಂದ ಹಾರಿದಾಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
 
ಇದರಿಂದ ಆಘಾತಗೊಂಡ ವಿಘ್ನೇಶ್, ಮನೆಯಲ್ಲಿದ್ದ ತನ್ನ ತಾಯಿಗೆ ಮಾಹಿತಿ ನೀಡಿದ್ದಾನೆ. ನಂತರ ಪೊಲೀಸರಿಗೆ ಹಾಗೂ ನೇಹಾಳ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ನೇಹಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. 
 
ಮಾರತಹಳ್ಳಿಯ ಚಿನ್ನಪ್ಪನಹಳ್ಳಿಯಲ್ಲಿ ವಾಸಿಸುತ್ತಿರುವ ನೇಹಾಳ ತಂದೆ ಮಲ್ಲೇಶ್ ರೆಡ್ಡಿ, ಆರೋಪಿ ವಿಘ್ನೇಶ್ ವಿರುದ್ಧ ದೂರು ಸಲ್ಲಿಸಿದ್ದಾರೆ.ದೂರಿನ ಆಧಾರದ ಮೇರೆಗೆ ಪೊಲೀಸರು ವಿಘ್ನೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ