ಸುದ್ದಿವಾಹಿನಿಯೊಂದರ ಜತೆ ಗ್ರಾಮದ ಸಮಸ್ಯೆ ಹೇಳಿಕೊಂಡನೆಂಬ ಕಾರಣಕ್ಕೆ ಕೊಲೆಯಾಗಿ ಹೋದ ಬಡಬಾಲಕ ಯಲ್ಲಾಲಿಂಗನ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆ ಯಲ್ಲಾಲಿಂಗನ ಮನೆಗೆ ಆಗಮಿಸಿದ ಪ್ರಮುಖ ಆರೋಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ ತನ್ನದೇನೂ ತಪ್ಪಿಲ್ಲ ಎಂದು ಹೈ ಡ್ರಾಮಾ ನಡೆಸಿದ್ದಾನೆ.
ಹನುಮೇಶ್ ನಾಯಕ ತಮ್ಮ ಮನೆಗೆ ಬಂದು, "ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ತನ್ನದೆನೂ ತಪ್ಪಿಲ್ಲ, ವಿನಾಕಾರಣ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ, ಎಂದು ಹೇಳಿ ಕೈ ಮುಗಿದು, ಕಾಲಿಗೆ ಬಿದ್ದು ಬೇಡಿಕೊಂಡಿದ್ದಾನೆ", ಎಂದು ಮೃತ ಯಲ್ಲಾಲಿಂಗನ ಸಂಬಂಧಿಕರು ದೂರಿದ್ದಾರೆ.
‘ಗದಗದಲ್ಲಿ ಪಿಯುಸಿ ಓದುತ್ತಿದ್ದ ಯಲ್ಲಾಲಿಂಗ ತನ್ನ ಬಂಧು ಅಂಗವಿಕಲೆಯೊಬ್ಬರಿಗೆ ಮಾಸಾಶನ ಕೊಡಿಸುವ ಸಲುವಾಗಿ ಬಂದಿದ್ದ. ಇದೇ ಸಂದರ್ಭ ಟಿವಿ ಸುದ್ದಿ ವಾಹಿನಿ ವರದಿಗಾರರು ಹುಲಿಹೈದರ್ ಗ್ರಾಮದ ಸಮಸ್ಯೆಗಳ ಬಗ್ಗೆ ಚಿತ್ರೀಕರಿಸುತ್ತಿದ್ದರು. ಈ ವೇಳೆಗೆ ಯಲ್ಲಾಲಿಂಗ ಗ್ರಾಮದಲ್ಲಿ ಸುಮಾರು ಏಳೂವರೆ ಕೋಟಿ ಅವ್ಯವಹಾರದ ನಡೆದ ಬಗ್ಗೆ ವಾಹಿನಿಗೆ ವಿವರಣೆ ನೀಡಿದ್ದ. ಸಂಜೆ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಆರೋಪಿಗಳು ನನ್ನ ಮಗನನ್ನು ಬೆನ್ನಟ್ಟಿ ಕೊಪ್ಪಳ ರೈಲು ನಿಲ್ದಾಣದ ಬಳಿ ಸಾಯಿಸಿದರು’ ಎಂದು ಕೆಂಚಮ್ಮ ದೂರು ಸಲ್ಲಿಸಿದ್ದರು.
ಯಲ್ಲಾಲಿಂಗ ಜನವರಿ 10ರಂದು ಕೊಪ್ಪಳ ರೈಲ್ವೆನಿಲ್ದಾಣದಲ್ಲಿ ಹತ್ಯೆಗೊಳಗಾಗಿದ್ದ. ಹಲವು ತಿರುವುಗಳನ್ನು ಪಡೆಯುತ್ತ ಸಾಗಿದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ ಅವರ ಪುತ್ರ ಮಹಾಂತೇಶ ನಾಯಕ ಸೇರಿ 6 ಕೊಲೆ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಎಂದು ಪರಿಗಣಿಸಲ್ಪಡುವ ಹನುಮೇಶ ನಾಯಕನನ್ನು ಈವರೆಗೆ ಬಂಧಿಸದಿರುವುದು ಸಂಶಯಕ್ಕೆ ಎಡೆ ಮಾಡಿದೆ. ಆತ ಸಚಿವ ಶಿವರಾಜ ತಂಗಡಗಿ ಆಪ್ತನಾಗಿದ್ದು ಅವರ ಪ್ರಭಾವ ಈ ಪ್ರಕರಣದಲ್ಲಿದೆ ಎಂದು ಹೇಳಲಾಗುತ್ತಿದೆ.