ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಯುವತಿ

ಗುರುವಾರ, 24 ಮಾರ್ಚ್ 2016 (23:06 IST)
ಮದುವೆಗೆ ಮುನ್ನವೇ ಭಾವಿ ಪತಿಯಿಂದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಶ್ರುತಿ ಎಂಬ 26 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನಲ್ಲಿ ಸಂಭವಿಸಿದೆ.
 
 ಎಂ.ಟೆಕ್ ಪದವೀಧರೆಯಾದ ಶ್ರುತಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಚನ್ನರಾಯಪಟ್ಟಣದಲ್ಲಿ ಸಾಫ್ಟ್‌ವೇರ್  ಇಂಜಿನಿಯರ್  ಕೆ.ಟಿ. ಹುತೇಶ್ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಡಲಾಗಿತ್ತು. ಹುತೇಶ್ ಕುಟುಂಬ ಕೇಳಿದ್ದರಿಂದ ನಿಶ್ಚಿತಾರ್ಥದ ವೇಳೆ 150 ಗ್ರಾಂ ಚಿನ್ನಾಭರಣಗಳನ್ನು ಶ್ರುತಿ ಕುಟುಂಬದವರು ನೀಡಿದ್ದರು. ಆದರೆ ಇದರಿಂದ ಸಮಾಧಾನವಾಗದ ಹುತೇಶ್ ನಿಶ್ಚಿತಾರ್ಥದ ನಂತರ ಶ್ರುತಿಗೆ ಮತ್ತಷ್ಟು ಬಂಗಾರ, ಸೈಟ್, ಕಾರು ನೀಡುವಂತೆ ಬೇಡಿಕೆ ಮಂಡಿಸಿದ್ದ. ಆದರೆ ಶ್ರುತಿ ಪೋಷಕರು ಈ ಕುರಿತು ಹುತೇಶ್ ಕುಟುಂಬದೊಂದಿಗೆ ಮಾತುಕತೆ ನಡೆಸಿ ಕಾರು, ಸೈಟು ನೀಡಲು ಅಸಹಾಯಕತೆ ತೋಡಿಕೊಂಡರೂ ಫಲನೀಡಿರಲಿಲ್ಲ. 
 
ಇದರಿಂದ ತೀವ್ರ ಖಿನ್ನತೆಗೊಳಗಾದ ಶ್ರುತಿ  ಮಾರ್ಚ್ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಾ. 21ರಂದು ಅಸುನೀಗಿದ್ದಾಳೆ. ಶ್ರುತಿಯ ತಂದೆ ಮಗಳ ಸಾವಿನಿಂದ ಆಕ್ರೋಶಗೊಂಡಿದ್ದು,  ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದರು. ಹುತೇಶ್ ವಿರುದ್ಧ ಆತ್ಮಹತ್ಯೆ ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಮಹಿಳಾ ಆಯೋಗ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. 

ವೆಬ್ದುನಿಯಾವನ್ನು ಓದಿ