ಪ್ರವಾಸಿಗರ ನೆಚ್ಚಿನ ತಾಣ ಮೈಸೂರು

ಶನಿವಾರ, 22 ನವೆಂಬರ್ 2014 (14:30 IST)
ಅರಮನೆಗಳ ನಗರಿ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿ ಪಡೆದಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮೈಸೂರು ಗತಕಾಲದ ಇತಿಹಾಸ ಸಾರುವ ನಗರಿ. ಕ್ರಿ.ಶ.1399ರಲ್ಲಿ ಯದುರಾಯನಿಂದ ಸ್ಥಾಪನೆಗೊಂಡ ಮೈಸೂರು ಅರಸು ಮನೆತನ ಪ್ರಾರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿತ್ತು. ಕ್ರಿ.ಶ.1578ರಲ್ಲಿ ಒಡೆಯರ ಪಾರುಪತ್ಯದಲ್ಲಿ ಮೈಸೂರು ಸ್ವತಂತ್ರ ಸಂಸ್ಥಾನವಾಯಿತು. ಕ್ರಿ.ಶ.1610ರ ವೇಳೆಗೆ ರಾಜ ಒಡೆಯರು ವಿಶ್ವವಿಖ್ಯಾತ ದಸರಾ ಉತ್ಸವ ಆರಂಭಿಸಿದರು.
 
ಇಲ್ಲಿನ ಅರಮನೆ ಹಾಗೂ ಕಟ್ಟಡಗಳು, ವಸ್ತುಸಂಗ್ರಹಾಲಯ ಗತವೈಭವಕ್ಕೆ ಸಾಕ್ಷಿಯಾಗಿವೆ. ಮಹಾರಾಜರ ಅರಮನೆ, ಜಗನ್ಮೋಹನ ಚಿತ್ರಕಲಾ ಶಾಲೆ, ಪ್ರಾಣಿ ಸಂಗ್ರಹಾಲಯ, ಲಲಿತ ಮಹಲ್, ಫಿಲೋಮಿನಾ ಚರ್ಚ್, ರೈಲ್ವೆ ಮ್ಯೂಸಿಯಂ, ರೇಶ್ಮೆ ಕಾರ್ಖಾನೆ, ಚಾಮುಂಡಿ ಬೆಟ್ಟ ಪ್ರಮುಖ ಆಕರ್ಷಣೀಯ ಸ್ಥಳಗಳು.
 
ಜಗಮೋಹನ್ ಅರಮನೆ:ಜಗನ್ಮೋಹನ ಅರಮನೆ 1816ರಲ್ಲಿ ನಿರ್ಮಾಣಗೊಂಡಿತ್ತು. ಹಳೆಯ ಅರಮನೆ ಅಗ್ನಿಗಾಹುತಿಯಾದ ಪರಿಣಾಮ, ಹೊಸ ಅರಮನೆ ನಿರ್ಮಾಣದವರೆಗೆ ಇದನ್ನು ತಾತ್ಕಾಲಿಕ ರಾಜವಸತಿಗಾಗಿ ಬಳಸಲಾಗಿತ್ತು. ಆನಂತರ ರಾಜಮನೆತನದ ಕಲಾವೇದಿಕೆಯನ್ನಾಗಿ ಬಳಸಲಾಗುತ್ತಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಇದನ್ನು ಚಿತ್ರಕಲಾ ಶಾಲೆಯನ್ನಾಗಿ ಮಾರ್ಪಾಡು ಮಾಡಲಾಯಿತು. ರಾಜಾ ರವಿವರ್ಮ, ಕೆ.ವೆಂಕಟಪ್ಪ, ರೋರಿಚ್ ಸೇರಿದಂತೆ ಪ್ರಸಿದ್ಧ ಕಲಾಕಾರರ ವರ್ಣಚಿತ್ರಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
 
ಲಲಿತ್ ಮಹಲ್ ಅರಮನೆ: ನಗರದಿಂದ ಸುಮಾರು 2ಕಿ.ಮೀ. ದೂರದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. ಇದನ್ನು ಗಣ್ಯ ಅತಿಥಿಗಳಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ 1921ರಲ್ಲಿ ಕಟ್ಟಿಸಿದರು. ಪ್ರಸ್ತುತ ಈ ಕಟ್ಟಡವನ್ನು ಭಾರತ ಪ್ರವಾಸೋದ್ಯಮ ಇಲಾಖೆ ಉನ್ನತ ದರ್ಜೆಯ ಹೋಟೆಲನ್ನಾಗಿ ಪರಿವರ್ತಿಸಿದೆ.
 
ಜಯಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯ: ದೇಶದ ಅತ್ಯಂತ ಹಳೆಯ ಪ್ರಾಣಿಸಂಗ್ರಹಾಲಯಗಳಲ್ಲಿ ಒಂದಾಗಿದೆ. ಇದನ್ನು 1892ರಲ್ಲಿ ಪ್ರಾರಂಭಿಸಲಾಯಿತು. 37.25ಹೆಕ್ಟೇರ್ ವಿಸ್ತಾರಕ್ಕೆ ಹರಡಿರುವ ಈ ಉದ್ಯಾನದಲ್ಲಿ ದೇಶ-ವಿದೇಶಗಳ ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ಇರಿಸಲಾಗಿದೆ.ಆನೆ, ಜಿರಾಫೆ, ಜಿಂಕೆ, ಕಡವೆ, ಚಿರತೆ, ಹುಲಿ, ನರಿ, ವಿವಿಧ ಜಾತಿಯ ಸರ್ಪಗಳು ಹಾಗೂ ಬಣ್ಣಬಣ್ಣದ ಪಕ್ಷಿಗಳು ಇಲ್ಲಿವೆ.
 
ಪ್ರಾಕೃತಿಕ ಇತಿಹಾಸ ಗ್ರಂಥಾಲಯ: ಕಾರಂಜಿ ಕೆರೆಯ ಪ್ರಶಾಂತ ಪರಿಸರದಲ್ಲಿ 1988ರಲ್ಲಿ ಈ ವಿಜ್ಞಾನ ಸಂಗ್ರಹಾಲಯ ಸ್ಥಾಪನೆಯಾಗಿತ್ತು. ಇಲ್ಲಿ ವಿವಿಧ ಸಸ್ಯ, ಪ್ರಾಣಿಗಳ ಮಾದರಿಗಳು, ನಮೂನೆಗಳು, ಶ್ರವಣ ದೃಶ್ಯ ಸಾಧನಗಳು, ವರ್ಣಚಿತ್ರಗಳು ಈ ಸಂಗ್ರಹಾಲಯದಲ್ಲಿವೆ.
 
ಜಯಲಕ್ಷ್ಮಿ ವಿಲಾಸ ಅರಮನೆ:ಚಾಮರಾಜ ಒಡೆಯರು ತಮ್ಮ ಹಿರಿಯ ರಾಜಪುತ್ರಿ ಜಯಲಕ್ಷ್ಮಮ್ಮಣ್ಣಿ ಅವರಿಗಾಗಿ 1905ರಲ್ಲಿ ಕಟ್ಟಿಸಿದ ಜಯಲಕ್ಷ್ಮಿ ವಿಲಾಸ ಅರಮನೆ ಮೈಸೂರು ವಿವಿ ಆವರಣದಲ್ಲಿದೆ. ಇತ್ತೀಚೆಗೆ 1.17ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಂಡಿದೆ.
 
ಸಂತ ಫಿಲೋಮಿನಾ ಚರ್ಚ್: 17ನೇ ಶತಮಾನದ ಗ್ರೀಕ್ ರಾಜಪುತ್ರಿ ಸಂತ ಫಿಲೋಮಿನಾ ಹೆಸರಿನಲ್ಲಿ ನಿರ್ಮಿಸಲಾದ ಈ ಕಟ್ಟಡಕ್ಕೆ ದಕ್ಷಿಣ ಭಾರತದ ಎತ್ತರದ ಗೋಪುರ ಎಂಬ ಹಿರಿಮೆ ಇದೆ. ಈ ಚರ್ಚ್‌ನ ನೆಲಮಾಳಿಗೆಯಲ್ಲಿ ರೋಮ್‌ನಿಂದ ತರಿಸಿದ ಫಿಲೋಮಿನಾರ ಅವಶೇಷವನ್ನು ಇರಿಸಲಾಗಿದೆ.
 
ಮಾರ್ಗ: ಮೈಸೂರಿಗೆ ಬೆಂಗಳೂರಿನಿಂದ 140ಕಿ.ಮೀ., ಮಂಗಳೂರಿನಿಂದ 248ಕಿ.ಮೀ. ಹಾಗೂ ಊಟಿಯಿಂದ 158ಕಿ.ಮೀ.ದೂರ. ಪ್ರವಾಸಿಗರಿಗೆ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ ಇಲ್ಲಿದೆ.
 

ವೆಬ್ದುನಿಯಾವನ್ನು ಓದಿ