ನಾನು ಒಂಟಿ, ಯಾರಿಗಾಗಿ ಭ್ರಷ್ಟನಾಗಲಿ?': ಮೋದಿ

ಶುಕ್ರವಾರ, 14 ಮಾರ್ಚ್ 2014 (15:57 IST)
PR
ಯಾವುದೇ ಕೌಟುಂಬಿಕ ಸಂಬಂಧಗಳನ್ನು ಹೊಂದಿರದ ವ್ಯಕ್ತಿ ಮಾತ್ರ ದೇಶದಲ್ಲಿನ ಭ್ರಷ್ಟಾಚಾರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಎಂದು ವಾದಿಸಿರುವ ನರೇಂದ್ರ ಮೋದಿ, ಒಂಟಿಯಾಗಿರುವ ನಾನು ಭ್ರಷ್ಟಾಚಾರ ವಿರುದ್ಧ ಹೋರಾಡಲು ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಹಮಿದ್ ಪುರ ದಲ್ಲಿ ಭಾನುವಾರ ನಡೆದ ಬಹಿರಂಗ ಸಭೆಯಲ್ಲಿ ಜನರುದ್ದೇಶಿಸಿ ಮಾತನಾಡುತ್ತಿದ್ದ " ಮೋದಿ ನನಗೆ ಹಿಂದೆ ಮುಂದೆ ಯಾರೂ ಇಲ್ಲ, ಯಾರಿಗಾಗಿ ಭ್ರಷ್ಟಾಚಾರ ಮಾಡಲಿ? ಈ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ದೇಶಕ್ಕೆ ಅರ್ಪಿತ" ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟ ಅಥವಾ ಯುಪಿಎ ಸರ್ಕಾರದ ಮೇಲೆ ಹರಿತ ದಾಳಿ ನಡೆಸಿದ ಮೋದಿ " ಯುಪಿಎ ಸರ್ಕಾರ ಭ್ರಷ್ಟಾಚಾರ ಪರಿಶೀಲಿಸಲು ವಿಫಲವಾಗಿದೆ " ಎಂದರು.

"ವಿದೇಶದಲ್ಲಿ ಕೂಡಿಟ್ಟಿರುವ ಹಣ ಭಾರತದ ಜನರಿಗೆ ಸೇರಿದ್ದು. ಈ ಜನರು (ಕಾಂಗ್ರೆಸ್ಸಿಗರು) ಬಡವರನ್ನು ಲೂಟಿ ಮಾಡಿ ಹಣವನ್ನು ವಿದೇಶದಲ್ಲಿ ಇಟ್ಟಿದ್ದಾರೆ. ಭ್ರಷ್ಟಾಚಾರ ದಿಂದ ನಾವು ಮುಕ್ತಿ ಹೊಂದಬೇಕೆಂದರೆ ಭ್ರಷ್ಟರಿಂದಲೂ ಮುಕ್ತಿ ಪಡೆಯುವ ಅಗತ್ಯವಿದೆ "ಎಂದು ಹೇಳಿದರು.

ತೆಲಂಗಾಣ ಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಅವರು " ಕಾಂಗ್ರೆಸ್ ಒಡಕುಂಟು ಮಾಡುವ ರಾಜಕೀಯದಲ್ಲಿ ತೊಡಗಿದೆ. ಅದು ವಿಷ ಬೀಜಗಳನ್ನು ಬಿತ್ತುತ್ತಿದೆ . ಇಡೀ ಆಂಧ್ರ ಪ್ರದೇಶ ಹೊತ್ತಿ ಉರಿಯುತ್ತಿದೆ. ಕಾಂಗ್ರೆಸ್ ತೆಲಂಗಾಣವನ್ನು ನಿರ್ಮಿಸಲು ಬಯಸಿದ ರೀತಿಯಿಂದ, ತೆಲಂಗಾಣ ಅಥವಾ ಸೀಮಾಂಧ್ರ ಎರಡೂ ಸಂತೋಷವಾಗಿಲ್ಲ . ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ರಾಜ್ಯಗಳನ್ನು ನಯವಾಗಿ ಸೃಷ್ಟಿಸುತ್ತಿದ್ದರು " ಎಂದು ಅಭಿಪ್ರಾಯಪಟ್ಟರು.

ಮೋದಿ (63) ವಿವಾಹವಾಗಿ ನಂತರ ಬೇರೆಯಾಗಿದ್ದಾರೆ ಎಂಬ ವರದಿಗಳಿಗೆ ಅವರು ಒಮ್ಮೆಯೂ ಪ್ರತಿಕ್ರಿಯಿಸಿಲ್ಲ. ಲೇಖಕ ನೀಲಾಂಜನ್ ಮುಖ್ಯೋಪಧ್ಯಾಯ್ ಇತ್ತೀಚಿಗೆ ಬರೆದ ಮೋದಿ ಜೀವನಚರಿತ್ರೆಯ ಪ್ರಕಾರ, ಬಿಜೆಪಿಯ ಸೈದ್ಧಾಂತಿಕ ಗುರು, ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಪ್ರಮುಖ ಕಾರ್ಯಕರ್ತರು ಮದುವೆಯಾಗುವುದನ್ನು ವಿರೋಧಿಸುತ್ತದೆ. ಆ ಕಾರಣದಿಂದ ಅವರು ತಾನು ಮದುವೆಯಾಗಿರುವುದನ್ನು ಗೌಪ್ಯವಾಗಿಟ್ಟಿದ್ದಾರೆ.

ಪ್ರಧಾನಿ ಹುದ್ದೆಗೆ ಮೋದಿಯ ಮುಖ್ಯ ಪ್ರತಿಸ್ಪರ್ಧಿ ಎನಿಸಿರುವ ರಾಹುಲ್ ಗಾಂಧಿ ಕೂಡ ಏಕಾಂಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ