ಆರೋಪಿ ಬಿಜೆಪಿ ಶಾಸಕನಿಗೆ ಕೈ ಮುಗಿದು ಸ್ವಾಗತಿಸಿದ ಜೈಲರ್‌

ಸೋಮವಾರ, 23 ಸೆಪ್ಟಂಬರ್ 2013 (12:42 IST)
PR
ಮುಜಾಫರ್ ನಗರದ ಕೋಮುಗಲಭೆಗೆ ಬಿಜೆಪಿ ಶಾಸಕ ಸಂಗೀತ್ ಸೋಮ್ ದ್ವೇಷ ಭಾಷಣವೇ ಕಾರಣ ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಆದರೆ, ಆರೋಪಿ ಶಾಸಕನಿಗೆ ಜೈಲಿನಲ್ಲಿ ಪ್ರಮುಖ ಅಧಿಕಾರಿಯೊಬ್ಬರು ಕೈಮುಗಿದು ಸ್ವಾಗತಿಸಿದ ಘಟನೆ ವರದಿಯಾಗಿದೆ.

ಜೈಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಾದಾ ಧಿರಿಸಿನಲ್ಲಿದ್ದ ಜೈಲಾಧಿಕಾರಿ ಎಲ್‌.ಪಿ.ಸಿಂಗ್ ಬಿಜೆಪಿ ಶಾಸಕನಿಗೆ ಎರಡು ಕೈಮುಗಿದು ಸ್ವಾಗತಿಸುತ್ತಿರುವುದು ಕಂಡು ಬಂದಿದೆ.ಇತರ ಪೊಲೀಸ್ ಅಧಿಕಾರಿಗಳು ಕೂಡಾ ಆರೋಪಿಗೆ ಸೆಲ್ಯೂಟ್ ಹೊಡೆಯುತ್ತಿರುವುದು ಕ್ಯಾಮರಾ ಸೆರೆಹಿಡಿದಿದೆ.

ಮುಜಾಫರ್ ನಗರದ ನ್ಯಾಯಾಲಾಯ ಬಂಧನ ವಾರೆಂಟ್ ಹೊರಡಿಸಿದ ನಂತರ ಉತ್ತರಪ್ರದೇಶದ ಬಿಜೆಪಿ ಶಾಸಕರಾದ ಸೋಮ್ ಮತ್ತು ಸುರೇಶ್ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಜಾಫರ್ ನಗರ ಕೋಮುಗಲಭೆಗೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ ಶಾಸಕ ನೂರ್ ಸಲೀಂ ರಾಣಾ ಅವರನ್ನು ಕೂಡಾ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಪ್ರಸಕ್ತ ತಿಂಗಳ ಆರಂಭದಲ್ಲಿ ಮುಜಾಫರ್‌ನಗರದಲ್ಲಿ ನಡೆದ ಕೋಮುಗಲಭೆಯಲ್ಲಿ 45 ಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ