ನವದೆಹಲಿ: ತೆಲಂಗಾಣದ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಪ್ರದೇಶದ ಜನರ ದಶಕಗಳ ಕಾಲದ ಹೋರಾಟ ಇಂದು ಫಲ ನೀಡಿದೆ. ಸಮನ್ವಯ ಸಮಿತಿ ಸಭೆಯಲ್ಲಿ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಸರ್ವಾನುಮತದ ಅನುಮೋದನೆ ಸಿಕ್ಕಿದ ಬಳಿಕ, ಈಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡ ತೆಲಂಗಾಣ ರಾಜ್ಯ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಸೋನಿಯಾ ಗಾಂಧಿ ನಿವಾಸದಲ್ಲಿ ಈ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ದೆಹಲಿಯ ಏಐಸಿಸಿ ಕಚೇರಿಯಲ್ಲಿ ಸಂಜೆ 7 ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತೆಲಂಗಾಣ ರಾಜ್ಯ ರಚನೆಯ ಸುದ್ದಿಯನ್ನು ಪ್ರಕಟಿಸಲಾಯಿತು. ಅಜಯ್ ಮಕೇನ್ ಮತ್ತು ದಿಗ್ವಿಜಯ್ ಸಿಂಗ್ ತೆಲಂಗಾಣ ರಾಜ್ಯ ರಚನೆ ಕುರಿತು ಹೇಳಿಕೆ ನೀಡಿದರು. ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳಿಗೂ ಹೈದರಾಬಾದ್ ರಾಜಧಾನಿಯಾಗಿ ಉಳಿಯಲಿದೆ.
10 ವರ್ಷಗಳವರೆಗೆ ಹೈದರಾಬಾದ್ ರಾಜಧಾನಿಯಾಗಲಿದೆ. ನಾಳೆ ವಿಶೇಷ ಕೇಂದ್ರ ಸಂಪುಟ ಸಭೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು. ತೆಲಂಗಾಣ ರಾಜ್ಯದ ಶತಾಯಗತಾಯ ಸ್ಥಾಪನೆಗೆ ಕಾಂಗ್ರೆಸ್ಸಿಗರು ಹೃತ್ಪೂರ್ವಕ ಬೆಂಬಲ ನೀಡಬೇಕು ಎಂದು ಮಕೇನ್ ತಿಳಿಸಿದರು.