ನರೇಂದ್ರ ಮೋದಿಗೆ ಮಾತ್ರ ನನ್ನ ಮತ: ಬಹಿರಂಗವಾಗಿ ಘೋಷಿಸಿದ ಕಿರಣ್ ಬೇಡಿ

ಶುಕ್ರವಾರ, 10 ಜನವರಿ 2014 (14:32 IST)
PTI
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ನೀಡುವುದಾಗಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಸಹಚರಳು ಮತ್ತು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಹಿರಂಗವಾಗಿ ಘೋಷಿಸಿದ್ದಾರೆ.

ಸಶಕ್ತ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ರಾಮಲೀಲಾ ಮೈದಾನದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಬೇಡಿ, ಇದೀಗ ನನ್ನ ಮತ ಮೋದಿಗೆ ಮಾತ್ರ ಎಂದು ಹೇಳಿದ್ದಾರೆ.

ದೆಹಲಿ ಕೇಜ್ರಿವಾಲ್ ವಿರುದ್ಧ ಅಪಸ್ವರ ಎತ್ತಿದ ಬೇಡಿ, ಜನಸಾಮಾನ್ಯರಿಂದ ಪ್ರತಿಫಲ ಬಯಸದೆ ಜನಸಾಮಾನ್ಯರ ಏಳಿಗೆಗಾಗಿ ದುಡಿಯುವಂತಹ ವ್ಯಕ್ತಿಗೆ ಮಾತ್ರ ನನ್ನ ಮತ ಮೀಸಲು ಎಂದು ಹೇಳಿಕೆ ನೀಡಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಕಿರಣ್‌ ಬೇಡಿಗೆ ಆಹ್ವಾನ ನೀಡಿದ್ದರೂ ಗೈರುಹಾಜರಾಗಿದ್ದರು. ಕೇಜ್ರಿವಾಲ್ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿದ ನಂತರ ಹಜಾರೆ, ಕಿರಣ್ ಬೇಡಿ ಮತ್ತು ಕೇಜ್ರಿವಾಲ್ ಪರಸ್ಪರರಿಂದ ದೂರವಾಗಿದ್ದರು.

ವೆಬ್ದುನಿಯಾವನ್ನು ಓದಿ