ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ರೆ ಉಚ್ಚಾಟನೆ: ಪುತ್ರ ಅಳಗಿರಿಗೆ ಎಚ್ಚರಿಕೆ ನೀಡಿದ ಕರುಣಾನಿಧಿ
ಬುಧವಾರ, 8 ಜನವರಿ 2014 (13:49 IST)
PTI
ಪಕ್ಷದ ನಿಯಮಗಳನ್ನು ಉಲ್ಲಂಘಿಸಿದವರನ್ನು ಮುಲಾಜಿಲ್ಲದೇ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ತಮ್ಮ ಪುತ್ರ ಎಂ.ಕೆ.ಅಳಗಿರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಟ ವಿಜಯ ಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷದೊಂದಿಗೆ ಮೈತಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಕರುಣಾನಿಧಿ ನೀಡಿದ ಹೇಳಿಕೆಗೆ ಅಳಗಿರಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಂದು ವೇಳೆ ಡಿಎಂಕೆ ಮತ್ತು ಡಿಎಂಡಿಕೆ ಮೈತ್ರಿಯಾದಲ್ಲಿ ತಾವು ಪಕ್ಷದಿಂದ ದೂರವಿರುವುದಾಗಿ ಅಳಗಿರಿ ಕಿಡಿಕಾರಿದ್ದರು.
ಡಿಎಂಕೆ ಮತ್ತು ಡಿಎಂಡಿಕೆ ಮೈತ್ರಿ ಕುರಿತಂತೆ ಪಕ್ಷದ ಕಾರ್ಯಕಾರಿ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವವರು ಪಕ್ಷದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಉಚ್ಚಾಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.