ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧವೇ ಗುಡುಗಿದ ವರುಣ್ ಗಾಂಧಿ

ಶುಕ್ರವಾರ, 14 ಮಾರ್ಚ್ 2014 (14:12 IST)
PTI
ನಗರದಲ್ಲಿ ನಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಭೆಯಲ್ಲಿ ಕೇವಲ 45 ರಿಂದ 50 ಸಾವಿರ ಜನರು ಉಪಸ್ಥಿತರಿದ್ದರೂ ಸಭೆ ಯಶಸ್ವಿಯಾಗಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮುಖಂಡ ವರುಣ್ ಗಾಂಧಿ ವಾಗ್ದಾಳಿ ನಡೆಸಿರುವುದು ಬಿಜೆಪಿ ಪಾಳಯವನ್ನು ತಲ್ಲಣಗೊಳಿಸಿದೆ.

ಕೋಲ್ಕತಾ ಸಾರ್ವಜನಿಕ ಸಭೆ ಯಶಸ್ವಿಯಾಗಿದೆ ಎಂದು ಬಿಜೆಪಿ ಮಾಧ್ಯಮ ವಲಯಗಳಲ್ಲಿ ಹರಡಿಸಲು ಪ್ರಯತ್ನ ಪಡುತ್ತಿರುವಂತೆ, ವರುಣ್ ಗಾಂಧಿ ಸಭೆಯಲ್ಲಿ 2 ಲಕ್ಷ ಜನ ಉಪಸ್ಥಿತರಿರಲಿಲ್ಲ. ಕೇವಲ 45 ರಿಂದ 50 ಸಾವಿರ ಜನರಿದ್ದರು ಎಂದು ನೀಡಿದ ಹೇಳಿಕೆ ಬಿಜೆಪಿಯಲ್ಲಿಯೇ ಅಪಸ್ವರ ಮೂಡಿಸಿದೆ.

ಒಂದು ವೇಳೆ ಇಂತಹ ಹೇಳಿಕೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಂದಿದ್ದಲ್ಲಿ ಅಚ್ಚರಿಯಾಗುತ್ತಿರಲಿಲ್ಲ. ಆದರೆ, ಬಿಜೆಪಿ ನಾಯಕನೊಬ್ಬನಿಂದ ಮೋದಿ ವಿರುದ್ಧವೇ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿ ಕೇಂದ್ರದಲ್ಲಿ ಸರಕಾರ ರಚಿಸಲಿದೆ ಎನ್ನುವ ಅವಧಿಯಲ್ಲಿ ವರುಣ್ ಯಾಕೆ ಇಂತಹ ಭಿನ್ನಮತದ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ಬಿಜೆಪಿ ನಾಯಕರಿಗೆ ಅರ್ಥವಾಗದ ಸಂಗತಿಯಾಗಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿರುವುದಕ್ಕೆ ವರುಣ್ ಗಾಂಧಿ ವಿರೋಧಿಸಿದ್ದರು ಮತ್ತು ಪ್ರಧಾನಿ ಅಭ್ಯರ್ಥಿಯಾಗಿ ರಾಜನಾಥ್ ಸಿಂಗ್ ಅವರನ್ನು ಘೋಷಿಸಿ ಎಂದು ಒತ್ತಾಯಿಸಿದ್ದಾಗ ಹೊಸತೊಂದು ವಿವಾದವನ್ನು ಸೃಷ್ಟಿಸಿತ್ತು.

ವೆಬ್ದುನಿಯಾವನ್ನು ಓದಿ