ಐಎಎಸ್ ಅಧಿಕಾರಿಗಳು ಇನ್ಮುಂದೆ ರಾಜಕಾರಣಿಗಳ ಮೌಖಿಕ ಆದೇಶ ಪಾಲಿಸಬಾರದು: ಸುಪ್ರೀಂಕೋರ್ಟ್

ಗುರುವಾರ, 31 ಅಕ್ಟೋಬರ್ 2013 (16:09 IST)
PTI
ಅಧಿಕಾರಶಾಹಿಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಐಎಎಸ್ ಅಧಿಕಾರಿಗಳು ರಾಜಕಾರಣಿಗಳ ಮೌಖಿಕ ಆದೇಶವನ್ನು ತಿರಸ್ಕರಿಸಿಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್‌ಆರ್ ಸುಬ್ರಮಣ್ಯನ್ ಮತ್ತು ಇತರ 82 ಅಧಿಕಾರಿಗಳು ಜಂಟಿಯಾಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೂರು ತಿಂಗಳೊಳಗಾಗಿ ಆದೇಶವನ್ನು ಜಾರಿಗೆ ತರುವಂತೆ ಸಮಯ ನಿಗದಿಪಡಿಸಿದೆ.

ಐಎಎಸ್ ಅಧಿಕಾರಿಗಳ ವರ್ಗಾವಣೆ, ವರ್ಗಾವಣೆ ಸ್ಥಳ ಮತ್ತು ಶಿಸ್ತುಕ್ರಮಗಳು ರಾಜಕೀಯ ಹಸ್ತಕ್ಷೇಪದಿಂದ ದೂರವಾಗಲು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸುವಂತೆ ನ್ಯಾಯಮೂರ್ತಿ ಕೆ.ಎಸ್.ರಾಧಾಕೃಷ್ಣನ್.ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ

ಐಎಎಸ್ ಅಧಿಕಾರಿಗಳನ್ನು ಮನಬಂದಂತೆ ವರ್ಗಾಯಿಸುತ್ತಿರುವುದು ನಿಲ್ಲಿಸಬೇಕು. ಐಎಎಸ್ ಅಧಿಕಾರಿಗಳ ವರ್ಗಾವಣೆ ಸಮಯವನ್ನು ನಿಗದಿಪಡಿಸಬೇಕು ಎಂದು ತಿಳಿಸಿದೆ.

ಐಎಎಸ್ ಅಧಿಕಾರಿಗಳು ರಾಜಕಾರಣಿಗಳ ಮೌಖಿಕ ಹೇಳಿಕೆಯನ್ನು ಪಾಲಿಸಬಾರದು. ಸರಕಾರಿ ಅಧಿಕಾರಿಗಳು ರಾಜಕಾರಣಿಗಳ ಮಾತಿಗೆ ಬೆಲೆಕೊಡದೆ ಲಿಖಿತ ಪತ್ರಗಳಿಗೆ ಮಾತ್ರ ಆದ್ಯತೆ ನೀಡಿ ಕರ್ತವ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.

ವಾಡ್ರಾ ವಿರುದ್ಧ ಧ್ವನಿ ಎತ್ತಿದ್ದ ಹರಿಯಾಣಾ ಐಎಎಸ್ ಅಧಿಕಾರಿ ಅಶೋಕ್ ಕೇಮ್ಕಾ, ದುರ್ಗಾ ಶಕ್ತಿ ನಾಗ್ಪಾಲ್ ಸೇರಿದಂತೆ ಅನೇಕ ಐಐಎಸ್ ಅಧಿಕಾರಿಗಳು ರಾಜಕಾರಣಿಗಳ ಸುಳಿಗೆ ಸಿಲುಕಿ ನೊಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ಪಷ್ಟ ತೀರ್ಪುನೀಡಿದೆ.

ವೆಬ್ದುನಿಯಾವನ್ನು ಓದಿ