27 ಮಂದಿಯ ಸಾವಿಗೆ ಕಾರಣವಾದ ಕಾಣಕೋಣದ ಕಟ್ಟಡ ಕುಸಿತ ದುರ್ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಣಕೋಣ ಪ್ರದೇಶದ ಜಿಲ್ಲಾಧಿಕಾರಿ ಪ್ರಶಾಂತ್ ಶಿರೋಡ್ಕರ್ ಅವರು ಕಾಣಕೋಣ ಮುನಿಸಿಪಲ್ ಕೌನ್ಸಿಲ್ನ ಮುಖ್ಯಾಧಿಕಾರಿಯೂ ಆಗಿದ್ದು ಅವರನ್ನು ಕಟ್ಟಡ ಕುಸಿತ ದುರ್ಘಟನೆಗೆ ಸಂಬಂಧಿಸಿ ಸೋಮವಾರ ಬಂಧಿಸಲಾಯಿತೆಂದು ಪೊಲೀಸರು ಹೇಳಿದ್ದಾರೆ.
ಕಳೆದ ಜನವರಿ 4ರಂದು ಕುಸಿದಿದ್ದ ಐದು ಮಹಡಿಗಳ, ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡಕ್ಕೆ ವಾಸ್ತವ್ಯ ಪರಿಪತ್ರಕ್ಕೆ ಶಿರೋಡ್ಕರ್ ಅವರು ಸಹಿ ಹಾಕಿದ್ದರು ಎಂದು ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಮದಾಯಿಕರ್ ಹೇಳಿದ್ದಾರೆ. ಈ ಪರಿಪತ್ರವನ್ನು ಡಿ.26ರಂದು ಶಿರೋಡ್ಕರ್ ನೀಡಿದ್ದರು. ಶಿರೋಡ್ಕರ್ ಅವರ ವಿರುದ್ಧ ಭ್ರಷ್ಟಾಚಾರ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.
ಕುಸಿದ ಕಟ್ಟಡದ ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯುವ 10 ದಿನಗಳ ಕಾರ್ಯಾಚರಣೆಯಲ್ಲಿ 27 ಮೃತ ದೇಹಗಳನ್ನು ಮೇಲೆತ್ತಲಾಗಿತ್ತು. ಈ ಕಾರ್ಯಾಚರಣೆಯು ಸೋಮವಾರದ ವರೆಗೂ ನಡೆದಿತ್ತು.