ಕಾಂಗ್ರೆಸ್ನದ್ದು ದುರ್ಬಲ ಕೈ, ಮೋದಿಯದ್ದು ಉಕ್ಕಿನದ್ದು: ರಾಜನಾಥ್ ಸಿಂಗ್
ಗುರುವಾರ, 4 ಜುಲೈ 2013 (12:47 IST)
PTI
ಯುಪಿಎ ಸರಕಾರದ ಆಡಳಿತದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲಪಿರುವುದನ್ನು ಟೀಕಿಸಿದ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್, ಆರ್ಥಿಕ ತಜ್ಞ ರೆನಿಸಿರುವ ಪ್ರಧಾನಿಯನ್ನು ಹೊಂದಿದ್ದರೂ ದೇಶದ ಆರ್ಥಿಕ ಆರೋಗ್ಯ ಕ್ಷೀಣಿಸಿರುವುದು ವಿಪರ್ಯಾಸ ಎಂದು ಹೇಳಿದರು.
'ದೇಶದ ಆಡಳಿತ ಉಕ್ಕಿನ ಕೈಗಳಲ್ಲಿರಬೇಕೇ ಹೊರತು ದುರ್ಬಲ ಕೈಗಳಲ್ಲಿ ಅಲ್ಲ. ತುಟಿ ಬಿಚ್ಚದ ವ್ಯಕ್ತಿ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಅವರು ಪ್ರಧಾನಿಯ ಹೆಸರು ಹೇಳದೆಯೇ ವಾಗ್ಧಾಳಿ ನಡೆಸಿದರು.
'ದೇಶಕ್ಕೆ ಅರ್ಥ ತಜ್ಞ ಪ್ರಧಾನಿಯ ಅಗತ್ಯವೇ ಇಲ್ಲ. ನಮಗೆ ಬೇಕಾದದ್ದು ವಸ್ತು ಸ್ಥಿತಿಗೆ ಸ್ಪಂದಿಸುವ, ನೈಜ ಸಮಸ್ಯೆಗಳ ಅರಿವುಳ್ಳ ಪ್ರಧಾನಿ' ಎಂದು ಅಸ್ಸಾಂನ ಬಿಜೆಪಿ ಕಾರ್ಯಕರ್ತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ರಾಜನಾಥ್ ಸಿಂಗ್ ಹೇಳಿದರು.
'ಎನ್ಡಿಎ ಆಡಳಿತ ಕಾಲದಲ್ಲಿ ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಇದೀಗ ಯುಪಿಎ ಆಡಳಿತದಲ್ಲಿ ಅದು ತೂಕ ತಪ್ಪಿದೆ' ಎಂದ ರಾಜನಾಥ್ ಸಿಂಗ್ ಸ್ವಿಸ್ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ ಕಾಳಧನವನ್ನು ಕಾಂಗ್ರೆಸ್ ನಾಯಕರು ಹಿಂದೆ ಪಡೆಯುತ್ತಿರುವುದರಿಂದಲೇ ರೂಪಾಯಿಯ ಮೌಲ್ಯ ಕಡಿಮೆಯಾಗಿದೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದರು.