ಕೇಜ್ರಿವಾಲ್ ಸರ್ಕಾರಕ್ಕೆ , ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಶುಕ್ರವಾರ, 24 ಜನವರಿ 2014 (13:23 IST)
PR
PR
ನವದೆಹಲಿ: ಕೇಜ್ರಿವಾಲ್ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ನೋಟಿಸ್ ನೀಡಿದೆ. ಮುಖ್ಯವಾಗಿ ಅರವಿಂದ್ ಕೇಜ್ರಿವಾಲ್ ಐವರು ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಎರಡು ದಿನಗಳ ಕಾಲ ಧರಣಿ ನಡೆಸಿದ್ದರಿಂದ ದೆಹಲಿ ಜನ ಸಂಚಾರ ಸ್ತಬ್ಧಗೊಂಡಿತ್ತು. ಕೇಜ್ರಿವಾಲ್ ಕಾನೂನಿಗೆ ವಿರುದ್ಧವಾಗಿ ಧರಣಿ ನಡೆಸಿದ್ದರು. ನಿಷೇಧಾಜ್ಞೆ ಜಾರಿ ಮಾಡಿದ್ದರೂ ಕೇಜ್ರಿವಾಲ್ ಅವರಿಗೆ ಧರಣಿಗೆ ಅವಕಾಶ ನೀಡಿದ್ದೇಕೆ ಎಂದು ಕೇಂದ್ರಸರ್ಕಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಇನ್ನು ಆರು ವಾರಗಳಲ್ಲಿ ಸುಪ್ರೀಂಕೋರ್ಟ್ ನೋಟಿಸ್‌ಗೆ ಕೇಜ್ರಿವಾಲ್ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಧರಣಿ ನಡೆಸಿದ ಕೇಜ್ರಿವಾಲ್, ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು ಬೆಂಬಲಿಗರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಬ್ಬರು ಸುಪ್ರೀಂಕೋರ್ಟ್ ವಕೀಲರು ಪಿಐಎಲ್ ಸಲ್ಲಿಸಿದ್ದರು. ದೆಹಲಿಯ ಹೃದಯಭಾಗದಲ್ಲಿ ಧರಣಿ ನಡೆಸಿದ್ದರಿಂದ ಜನರ ಮುಕ್ತ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.ಈ ನಡುವೆ ದೆಹಲಿ ಪೊಲೀಸರು ಕೇಜ್ರಿವಾಲ್ ಧರಣಿಗೆ ಸಂಬಂಧಿಸಿ ನಾಲ್ಕು ಕೇಸ್ ದಾಖಲು ಮಾಡಿದ್ದಾರೆ. ಕೇಜ್ರಿವಾಲ್ ಅವರ ಭೇಟಿಗೆ ತೆರಳಿದ್ದ ಇಬ್ಬರು ಶಿಕ್ಷಕಿಯರನ್ನು ಪ್ರತಿಭಟನಾಕಾರರು ನಿಲ್ಲಿಸಿ ಕಿರುಕುಳ ನೀಡಿದರೆಂಬ ಆರೋಪಕ್ಕೆ ಸಂಬಂಧಿಸಿ ಎರಡು ಎಫ್ಐಆರ್‌ಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ