ಗುರುತು ಚೀಟಿ ಯೋಜನೆಯಿನ್ನು 'ಆಧಾರ್'; ಹೊಸ ಲಾಂಛನ

ಸೋಮವಾರ, 26 ಏಪ್ರಿಲ್ 2010 (20:10 IST)
ದೇಶದ ಪ್ರತಿ ನಾಗರಿಕರಿಗೂ 16 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ನೀಡುವ ಯುಪಿಎ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಸೋಮವಾರ 'ಆಧಾರ್' ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಲಾಂಛನವನ್ನು ಕೂಡ ಬಿಡುಗಡೆ ಮಾಡಲಾಗಿದೆ.
PTI

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಅಧ್ಯಕ್ಷರಾಗಿರುವ ಐಟಿ ದಿಗ್ಗಜ ನಂದನ್ ನಿಲೇಕಣಿಯವರು 'ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆ'ಯು (ಯುಐಡಿ) ಜನಸಾಮಾನ್ಯರನ್ನು ಸುಲಭವಾಗಿ ತಲುಪುವಂತಾಗುವ ನಿಟ್ಟಿನಲ್ಲಿ 'ಆಧಾರ್' ಎಂದು ಮರು ನಾಮಕರಣಗೊಳಿಸಿದ್ದಾರೆ.

ಯುಐಡಿ ಎನ್ನುವುದು ತುಂಬಾ ಗೊಂದಲ ಹುಟ್ಟಿಸುತ್ತಿದೆ. ಕೆಲವು ಇದನ್ನು ಡಿಯುಐ ಎಂದು, ಇನ್ನು ಕೆಲವರು ಐಯುಡಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯ ಹೆಸರನ್ನು ಯೋಜನೆಗೆ ಇಡುವ ನಿರ್ಧಾರಕ್ಕೆ ಬರಲಾಯಿತು ಎಂದು ನಿಲೇಕಣಿ ತಿಳಿಸಿದ್ದಾರೆ.

ಅದೇ ರೀತಿ ಉತ್ಕೃಷ್ಟ ಗುಣಮಟ್ಟದ ಲಾಂಛನವನ್ನು ಕೂಡ ಸಿದ್ಧಪಡಿಸಲಾಗಿದೆ. ಈ ನೂತನ ಲಾಂಛನದಲ್ಲಿ ಸೂರ್ಯ ಹಳದಿ ಬಣ್ಣದಿಂದ ಹೊರಗಡೆ ಕಂಗೊಳಿಸುತ್ತಿದ್ದರೆ, ಮಧ್ಯದಲ್ಲಿ ಹೆಬ್ಬೆಟ್ಟಿನ ಚಿಹ್ನೆ ಕೆಂಪು ಬಣ್ಣದಲ್ಲಿದೆ. ಇದನ್ನು ಸಾರ್ವಜನಿಕರು ಕಳುಹಿಸಿದ ಲಾಂಛನದಿಂದ ಆರಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಆಧಾರ್ ಲಾಂಛನಕ್ಕಾಗಿ ದೇಶದಾದ್ಯಂತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಗೆ ಮುಂಬೈ ನಿವಾಸಿ ಅತುಲ್ ಸುಧಾಕರ ರಾವ್ ಪಾಂಡೆ ಎಂಬ ಜನಸಾಮಾನ್ಯ ರಚಿಸಿದ ಲಾಂಛನವನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ. ಅವರಿಗೆ ಇದೇ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು.

ಈ ಲಾಂಛನವನ್ನು ಅನಾವರಣಗೊಳಿಸಿದ್ದು ಕೂಡ ಜನಸಾಮಾನ್ಯನಾದ ಉತ್ತರ ಪ್ರದೇಶದ ಅಜಂಗಢದ ನಿವಾಸಿ ಧನೇಶ್ವರ್ ರಾಮ್.

ವೆಬ್ದುನಿಯಾವನ್ನು ಓದಿ