ಚೀನಾ ಭೇಟಿ ರದ್ದುಗೊಳಿಸಿ: ಖುರ್ಷಿದ್‌ಗೆ ಬಿಜೆಪಿ ಒತ್ತಾಯ

ಸೋಮವಾರ, 29 ಏಪ್ರಿಲ್ 2013 (14:42 IST)
PTI
ಭಾರತದ ಗಡಿ ದಾಟಿ ಬಂದು ಲದ್ದಾಕ್‌ನ ಡಿಪ್ಸಾಂಗ್‌ ಕಣಿವೆಯಲ್ಲಿ ಕಳೆದೆರಡು ವಾರಗಳಿಂದ ಠಿಕಾಣಿ ಹೂಡಿರುವ ಚೀನಿ ಸೈನಿಕರನ್ನು ಚೀನ ಸರಕಾರ ಹಿಂದಕ್ಕೆ ಕರೆಸಿಕೊಳ್ಳುವ ತನಕ ವಿದೇಶ ಸಚಿವ ಸಲ್ಮಾನ್‌ ಖುರ್ಷಿದ್‌ ಅವರು ಚೀನಕ್ಕೆ ಭೇಟಿ ನೀಡಬಾರದೆಂದು ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್‌ ಆಗ್ರಹಿಸಿದರು.

ಚೀನಿ ಸೇನೆ ಗಡಿ ದಾಟಿ 19 ಕಿ.ಮೀ.ಗಳಷ್ಟು ಒಳಗೆ ಅತಿಕ್ರಮಣ ನಡೆಸಿ ಭಾರತದ ನೆಲದಲ್ಲಿ ಶಿಬಿರ ಹೂಡಿದೆ. ಹೀಗಿದ್ದೂ ಖುರ್ಷಿದ್‌ ಚೀನಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ದೊಡ್ಡ ದುರಂತ. ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಖುರ್ಷಿದ್‌ ಭೇಟಿಗೆ ತಡೆಯೊಡ್ಡಬೇಕು. ಚೀನಿ ಸೈನಿಕರು ಅತಿಕ್ರಮಣವನ್ನು ತೆರವುಗೊಳಿಸಿ ಗಡಿ ದಾಟಿ ಹೋಗುವ ತನಕ ಚೀನಕ್ಕೆ ಭಾರತ ಸರಕಾರದ ಯಾವುದೇ ಪ್ರತಿನಿಧಿ ಬೀಜಿಂಗ್‌ಗೆ ಭೇಟಿ ನೀಡಬಾರದು ಎಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ರಾಜನಾಥ್‌ ಹೇಳಿದರು.

ಅತಿಕ್ರಮಿತ ಪ್ರದೇಶವು 2010ರ ತನಕ ಸೇನೆಯ ನಿಯಂತ್ರಣದಲ್ಲಿತ್ತು. ಈಗ ಅದು ಗೃಹ ಖಾತೆಯ ವ್ಯಾಪ್ತಿಗೊಳಪಟ್ಟ ಐಟಿಬಿಪಿ ವಶದಲ್ಲಿದೆ. ದಿಪ್ಸಾಂಗ್‌ನಲ್ಲಿ ಸೇನೆಯ ಹೊರತು ಬೇರಾವುದೇ ಪಡೆ ಕಾರ್ಯ ನಿರ್ವಹಿಸುವುದು ಸಾಧ್ಯವಿಲ್ಲ. ಇದೊಂದು ಸೂಕ್ಷ್ಮ ವಿಷಯವಾಗಿದ್ದು ದೇಶವು ಹೊರಗಿನಿಂದ ಗಂಭೀರ ಅಪಾಯವನ್ನು ಎದುರಿಸುತ್ತಿದೆ. ಆದ್ದರಿಂದ ಸರಕಾರ ತತ್‌ಕ್ಷಣವೆ ಈ ಭೂ ಪ್ರದೇಶವನ್ನು ಮರಳಿ ಸೇನೆಯ ಸುಪರ್ದಿಗೆ ನೀಡಬೇಕು ಎಂದವರು ಆಗ್ರಹಿಸಿದರು.

ಚೀನವು ಎಲ್ಲ ದಿಕ್ಕುಗಳಿಂದಲೂ ಭಾರತವನ್ನು ಆವರಿಸುತ್ತಿದೆ. ಈ ಬಗ್ಗೆ 5 ವರ್ಷ ಹಿಂದೆಯೆ ತಾನು ಸರಕಾರದ ಗಮನ ಸೆಳೆದಿದ್ದೆ.ಚೀನವು ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಿಸಿ ನೀರನ್ನು ತಿರುಗಿಸಲು ಪ್ರಯತ್ನಿಸುತ್ತಿರುವ ವಿಚಾರದ ಬಗ್ಗೆ 6 ವರ್ಷ ಹಿಂದೆಯೆ ತಾನು ಪ್ರಧಾನಿಯ ಗಮನ ಸೆಳೆದಿದ್ದೆ. ಇದೊಂದು ಗಂಭೀರ ವಿಚಾರವಾಗಿದ್ದು ತಾನು ಖುದ್ದಾಗಿ ಈ ಬಗ್ಗೆ ಚರ್ಚಿಸುವುದಾಗಿ ಪ್ರಧಾನಿ ತನಗೆ ಭರವಸೆಯನ್ನೂ ನೀಡಿದ್ದರು. ಆದರೆ ಈ ವಿಷಯದಲ್ಲಿ ಪ್ರಧಾನಿ ಏನೂ ಮಾಡಿಲ್ಲ ಎಂದು ರಾಜನಾಥ್‌ ಆರೋಪಿಸಿದರು.

ವೆಬ್ದುನಿಯಾವನ್ನು ಓದಿ