ಚುನಾವಣೆ: ದೆಹಲಿ ಸಿಎಂ ವಿರುದ್ಧ ಕೇಜ್ರಿವಾಲ್ ಕಣಕ್ಕೆ

ಸೋಮವಾರ, 3 ಜೂನ್ 2013 (13:27 IST)
PTI
ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ವಿರುದ್ಧ ಕಣಕ್ಕಿಳಿಯಲು ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ನಿರ್ಧರಿಸಿದ್ದಾರೆ.

ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಅವರು, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಅಭಿಪ್ರಾಯ ಸಂಗ್ರಹಿಸಲು ಸ್ವಯಂಸೇವಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಕೇಜ್ರಿವಾಲ್‌, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಶೀಲಾ ವಿರುದ್ಧ ಕಣಕ್ಕಿಳಿಸಿತ್ತು ಎಂದರು. ಅಲ್ಲದೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ವಿಜಯ್‌ ಗೋಯೆಲ್‌ ಅವರು ತಮ್ಮ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

ಶೀಲಾ ಪ್ರತಿನಿಧಿಸುತ್ತಿರುವ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿರುವ ಕೇಜ್ರಿವಾಲ್‌, ಒಂದು ವೇಳೆ ಶೀಲಾ ಅವರು ಕ್ಷೇತ್ರ ಬದಲಿಸಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಅಲ್ಲಿಂದಲೇ ನಾನೂ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದರು.

ವೆಬ್ದುನಿಯಾವನ್ನು ಓದಿ